ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿದ್ದು, ತಮಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕಾರಣ ಎಂದು ಆರೋಪ ಮಾಡಿದ್ದಾರೆ.
ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಕೋರ್ ಕಮಿಟಿ ಸಭೆಯಲ್ಲಿ ನನ್ನ ಹೆಸರು ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದ್ರೆ, ಕೊನೆಗೆ ಟಿಕೆಟ್ ಕೈತಪ್ಪುವುದಕ್ಕೆ ಸಂತೋಷ್ ಕಾರಣ. ಉಳಿದಂತೆ ರಾಮದಾಸ್ ಸಂತೋಷ್ ಆಪ್ತ ಅಲ್ಲ. ಶ್ರೀವತ್ಸ ಸಂತೋಷ್ ಅವರ ಆಪ್ತ. ಹಾಗಾಗಿ ರಾಮದಾಸ್ಗೆ ಟಿಕೆಟ್ ಕೈತಪ್ಪಿದ್ದು, ಶ್ರೀವತ್ಸಗೆ ಟಿಕೆಟ್ ಸಿಕ್ಕಿದೆ.
ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ. ಬಿಎಲ್ ಸಂತೋಷ್ ಕೇರಳದಲ್ಲಿ ಚುನಾವಣೆ ಉಸ್ತುವಾರಿ ವಹಿಸಿಕೊಂಡರು. ಒಂದು ಸೀಟ್ ಬರಲಿಲ್ಲ. ತಮಿಳುನಾಡಿಲ್ಲಿ ಎರಡು ಮೂರು ಸೀಟ್ ಬಂತು. ಇವತ್ತು ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಸಂತೋಷ್ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.
ನಳಿನ್ ಆಡಿಯೋ ಸತ್ಯ: ಕೋರ್ ಕಮಿಟಿಯಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್. ಕಟೀಲ್ ಅವರ ರಾಜಾಧ್ಯಕ್ಷ ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಆಗಿಲ್ಲ. ಬಿ.ಎಲ್.ಸಂತೋಷ್ ಹೇಳಿದಂತೆ ನಳಿನ್ ಕುಮಾರ್ ಕೇಳುತ್ತಾರೆ. ಕಟೀಲು ಕೆಲ ದಿನಗಳ ಹಿಂದೆ ಮಾತಾಡಿದ್ದ ಆಡಿಯೋ ವೈರಲ್ ಆಗಿತ್ತು. ಯಡಿಯೂರಪ್ಪನವರ ಕಾಲ ಮುಗಿತು, ಈಶ್ವರಪ್ಪ, ಶೆಟ್ಟರ್ ಮುಗಿಸುತ್ತೇವೆ ಎಂದಿದ್ದರು ಇದು ಇಂದು ಸತ್ಯವಾಗಿದೆ ಎಂದರು.