ಬೆಂಗಳೂರು: ಆಟವಾಡುತ್ತಾ ರಸ್ತೆಗೆ ಹೋದ ನಾಲ್ಕು ವರ್ಷದ ಮಗು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಕುಂಬಳಗೋಡು ಸಮೀಪದ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ.
4 ವರ್ಷದ ಆಯುಷ್ಯ ಮೃತ ದುರ್ದೈವಿ. ಉತ್ತರ ಭಾರತದಿಂದ ಬಂದಿದ್ದ ದಂಪತಿ ರಾಮೋಹಳ್ಳಿಯಲ್ಲಿ ನೆಲೆಸಿದ್ದರು.
ನಿನ್ನೆ ಸಂಜೆ ಮಕ್ಕಳ ಜೊತೆ ತಾಯಿ ಬಸ್ ಸ್ಟಾಪ್ ಹತ್ತಿರ ಬಂದಿದ್ದಾರೆ. ಆಗ ಒಬ್ಬ ಮಗ ಆಯುಷ್ಯ ಆಟವಾಡುತ್ತಾ ರಸ್ತೆಗೆ ಹೋಗಿದ್ದಾನೆ.ಈ ವೇಳೆ ಬಸ್ ಅನ್ನು ಓವರ್ ಟೇಕ್ ಮಾಡಲು ಹೋದ ಲಾರಿ 4 ವರ್ಷದ ಆಯುಷ್ಯನ ಮೇಲೆ ಹರಿದಿದೆ.
ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಲಕನ ಸಾವಿಗೆ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಮೇಲೆ ಕಲ್ಲು ತೂರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂಬಳಗೋಡು ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.