ಬೆಂಗಳೂರು; ನಾಳೆ ಸಂಜೆ ದೆಹಲಿಗೆ ಪ್ರಯಾಣಿಸುತ್ತಿದ್ದು ಏಪ್ರಿಲ್ 30ರಂದು ದೆಹಲಿಯಲ್ಲಿ ಮುಖ್ಯಮಂತ್ರಿಗಳು ಮತ್ತು ಎಲ್ಲಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನವಿದ್ದು, ಅದರಲ್ಲಿ ಭಾಗವಹಿಸಿ ಬರುತ್ತೇನೆ, ಹಲವು ಆಡಳಿತಾತ್ಮಕ ವಿಷಯಗಳು ಚರ್ಚೆಯಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೈಕಮಾಂಡ್ ಭೇಟಿಗೆ ಸಮಯವನ್ನು ಕೇಳಿಲ್ಲ, ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಹೈಕಮಾಂಡ್ ನಾಯಕರ ಭೇಟಿ ಉದ್ದೇಶ ಕೂಡ ಇಲ್ಲ ಎಂದರು. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ನಾವು ಮಾಡುವ ಎಲ್ಲಾ ಕೆಲಸಗಳನ್ನು ಟೀಕೆ ಮಾಡುತ್ತಾರೆ. ಇಟ್ಟರೆ ಯಾಕೆ ಇಟ್ಟಿರಿ, ತೆಗೆದರೆ ಏಕೆ ತೆಗೆದಿರಿ ಎನ್ನುತ್ತಾರೆ. ಅದಕ್ಕೆಲ್ಲಾ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ, ಇವೆಲ್ಲಾ ಕೇವಲ ಆಡಳಿತಾತ್ಮಕ ಕ್ರಮಗಳಷ್ಟೆ ಎಂದರು.
ಕೆಲವು ಅಧಿಕಾರಿಗಳ ಸೇವಾ ಸಮಯ ಮುಗಿದಿತ್ತು, ಈ ವರ್ಗಾವಣೆ, ಬಡ್ತಿಯೆಲ್ಲಾ ನಿಗದಿತ ಆಡಳಿತಾತ್ಮಕ ವಿಧಾನಗಳಷ್ಟೆ ಎಂದರು.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸಿಐಡಿ ಎಡಿಜಿಪಿ ಅಮೃತ್ ಪೌಲ್ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಅಮೃತ ಪೌಲ್ ವರ್ಗಾವಣೆ ಒಂದು ರೂಟೀನ್ ಪ್ರೊಸೆಸ್, ಬೇರೆ ಎಡಿಜಿಪಿಗಳ ವರ್ಗಾವಣೆ ಕೂಡ ಇತ್ತು. ಅದೊಂದು ಸಹಜ ಪ್ರಕ್ರಿಯೆಯಷ್ಟೆ ಎಂದರು.