ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭವಾಗಲಿದೆ. ಮೊದಲ ದಿನವೇ ಕಾವೇರುವ ಸಾಧ್ಯತೆಗಳಿವೆ.
ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೋವಿಡ್ ನಿರ್ವಹಣೆ ವಿಚಾರಗಳ ಹಿಡಿದು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಜ್ಜಾಗಿವೆ.
ಇದೇ ವೇಳೆ ಸರ್ಕಾರವು 17 ವಿಧೇಯಗಳನ್ನು ಮಂಡಿಸಲು ಸಿದ್ಧತೆ ನಡೆಸಿದ್ದು, ಇದರಲ್ಲಿ 3 ಸುಗ್ರೀವಾಜ್ಞೆ ಕೂಡ ಸೇರಿವೆ ಎಂದು ತಿಳಿದುಬಂದಿದೆ.
ಆಗಸ್ಟ್ 13ರಂದು ಮುಗಿಯಲಿರುವ ಈ ಅಧಿವೇಶನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ರೂ.100 ಗಡಿ ದಾಟಿರುವುದು ಪ್ರಮುಖ ವಿಷಯವಾಗುವ ಸಾಧ್ಯತೆಗಳಿವೆ. ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಬಯಸುಲು ಕಾಂಗ್ರೆಸ್ ಆದಿಯಾಗಿ ವಿವಿಧ ಪಕ್ಷಗಳು ತೀರ್ಮಾನಿಸಿದೆ.
ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ-ಬಿಜೆಪಿ ರಾಜಕೀಯ ಸಂಘರ್ಷ ಕೂಡ ಕೋಲಾಹಲ ಎಬ್ಬಿಸುವ ಸಾಧ್ಯತೆಗಳಿವೆ.