ಬೆಂಗಳೂರು: ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆಯೋಜಿಸಲಾದ ಸಾಧನಾ ಸಮಾವೇಶದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ಗದಿತಗರಾಗಿದ್ದಾರೆ.
ಭಾಷಣದ ವೇಳೆ ಭಾವುಕರಾದ ಸಿಎಂ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಶಿಕಾರಿಪುರ ಜನ 7 ಬಾರಿ ಶಾಸಕನಾಗಿ ಮಾಡಿದ್ದಕ್ಕೆ ಅಧಿಕಾರ ಸಿಕ್ಕಿತು. ಶಿಕಾರಿಪುರ ಜನರಿಂದ ನನಗೆ ಸಿಎಂ ಸ್ಥಾನ ಸಿಕ್ಕಿತು ಎಂದು ಹೇಳುತ್ತಲೇ ಅವರ ಕಣ್ಣಾಲಿಗಳು ಒದ್ದೆಯಾಗಿವೆ.
ಎಲ್ಲೋ ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಜೀವನ ಆರಂಭ ಮಾಡಿದೆ. ಆರ್ಎಸ್ಎಸ್ ಪ್ರಚಾರಕನಾಗಿ ಕೆಲಸ ಮಾಡಿದ್ದೆ. ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದೆ. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಕಚೇರಿಗೆ ಹೋಗುವ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದಾಗ ನನ್ನ ಜೀವನ ಮುಗಿದೇ ಹೋಯಿತು ಎಂದುಕೊಂಡಿದ್ದೆ. ಆಗ ನಾನು ಬದುಕಿದರೆ ನನ್ನ ಜೀವನ ರಾಜ್ಯದ ಜನರ ಸೇವೆಗೆ ಮೀಸಲು ಎಂದು ನನ್ನ ಕುಟುಂಬಸ್ಥರಿಗೆ ಹೇಳಿದ್ದೆ. ಇದುವರೆಗೂ ಆ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದರು.
75 ವರ್ಷ ದಾಟಿದವರಿಗೆ ಅಧಿಕಾರ ಕೊಡದಿರಲು ಬಿಜೆಪಿಯಲ್ಲಿ ನಿರ್ಧರಿಸಿದ್ದರೂ ನನ್ನ ಮೇಲಿನ ಪ್ರೀತಿ ವಾತ್ಸಲ್ಯದಿಂದ ಪ್ರಧಾನಿ ಮೋದಿ, ಅಮಿತ್ ಶಾ ಅವಕಾಶ ಮಾಡಿಕೊಟ್ಟರು. ಮತ್ತೊಮ್ಮೆ ಪ್ರಧಾನಿ ಮೋದಿ ಆಡಳಿತ ಬರಬೇಕು. ಆಗ ಮಾತ್ರ ಭಾರತ ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಲಿದೆ. ಇದು ಈ ದೇಶದ ಅಭಿಪ್ರಾಯವಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.