ಬೆಂಗಳೂರು: ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಬಂಗಾರಪ್ಪ ನಗರ ಮತ್ತು ಶಿವನಪಾಳ್ಯದ ಮಸ್ಟರಿಂಗ್ ಕೇಂದ್ರಗಳಿಗೆ ನಿನ್ನೆ ಭೇಟಿ ನೀಡಿ ಪೌರ ಕಾರ್ಮಿಕರನ್ನು ಮಾತನಾಡಿಸಿದರು.
ವೇತನ ಸಕಾಲದಲ್ಲಿ ಪಾವತಿ ಆಗದಿರುವ ಬಗ್ಗೆ ಆಟೊಟಿಪ್ಪರ್ ಚಾಲಕರು ಮತ್ತು ಸಹಾಯಕರು ಅಹವಾಲು ಹೇಳಿಕೊಂಡರು. ಆಟೊಟಿಪ್ಪರ್ ಸಿಬ್ಬಂದಿಗೆ ನಿಗದಿತ ಸಮಯದಲ್ಲೇ ವೇತನ ಪಾವತಿಸಬೇಕು. ಆಯಾ ತಿಂಗಳೇ ಪಾಲಿಕೆಗೆ ಬಿಲ್ ಸಲ್ಲಿಸಿ ಹಣ ಪಡೆದುಕೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ಮುಖ್ಯ ಆಯುಕ್ತರು ಸೂಚಿಸಿದರು. ವೇತನ ಪಾವತಿ ವಿಳಂಬ ಆಗದಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಅಧಿಕಾರಿಗಲಿಗೆ ನಿರ್ದೇಶನ ನೀಡಿದರು.