ಬೆಂಗಳೂರು: ಪಶುಸಂಗೋಪನೆ ಮತ್ತು ಮೀನು ಉತ್ಪಾದನೆಯಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸೃಷ್ಟಿಸಲು ಪಶು ಮತ್ತು ಮೀನುಗಾರಿಕೆ ವಿಜ್ಞಾನದಲ್ಲಿ ಅಧ್ಯಯನ, ಸಂಶೋಧನೆಯ ತುರ್ತು ಅಗತ್ಯವಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಗುರುವಾರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿ, ಈ ವಿಶ್ವವಿದ್ಯಾನಿಲಯವನ್ನು ಕರ್ನಾಟಕ ರಾಜ್ಯದ ಪಶುವೈದ್ಯಕೀಯ, ಪಶು, ಡೈರಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಶಿಕ್ಷಣ ಮತ್ತು ಗ್ರಾಮೀಣ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಯ ಉದ್ದೇಶದಿಂದ ಸ್ಥಾಪಿಸಲಾಗಿದ್ದು, ವಿಶ್ವವಿದ್ಯಾನಿಲಯವು ಪ್ರಾರಂಭದಿಂದಲೂ ರೈತ ಮತ್ತು ಗ್ರಾಮೀಣ ದೃಷ್ಟಿಕೋನಕ್ಕಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ಜಾಗತಿಕ ಸನ್ನಿವೇಶದಲ್ಲಿ ರೈತ ಸಮುದಾಯದ ಉದಯೋನ್ಮುಖ ಸವಾಲುಗಳನ್ನು ಮತ್ತು ತರಬೇಕಾದ ಬದಲಾವಣೆಗಳನ್ನು ಪರಿಗಣಿಸುವ ಅವಶ್ಯಕತೆಯಿದೆ. ಕೃಷಿ ಉತ್ಪಾದಕತೆ ಹೆಚ್ಚಳ, ರೈತರ ಆದಾಯದಲ್ಲಿ ಹೆಚ್ಚಳ, ಜ್ಞಾನ ಮಟ್ಟ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಜೀವವೈವಿಧ್ಯ ಸಂರಕ್ಷಣೆ, ಹವಾಮಾನ ಬದಲಾವಣೆ, ಸ್ಥಳೀಯ ವ್ಯವಸ್ಥೆಗಳ ಮೇಲೆ ಗಮನ ಕೇಂದ್ರೀಕರಿಸುವುದು ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಉದ್ಯಮ, ಉದ್ಯಮಶೀಲತೆಯನ್ನು ವಿಸ್ತರಿಸಲು ಒತ್ತು ನೀಡಬೇಕಾಗಿದೆ.
ಈ ದಿಕ್ಕಿನಲ್ಲಿ, ವಿಶ್ವವಿದ್ಯಾನಿಲಯವು ರಾಜ್ಯ ಮತ್ತು ದೇಶದ ಜಾನುವಾರು ಮತ್ತು ಮೀನುಗಾರಿಕಾ ಸಮುದಾಯಕ್ಕೆ ಸೇವೆ ಸಲ್ಲಿಸಲು ಅತ್ಯುತ್ತಮ ಮಾನವ ಸಂಪನ್ಮೂಲ, ನವೀನ ತಂತ್ರಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ, ಶಿಕ್ಷಣ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಶುಸಂಗೋಪನೆ ಮತ್ತು ಮೀನು ಉತ್ಪಾದನೆಯು ಜೀವನಾಧಾರವಾಗಿದೆ. ವಿಶೇಷವಾಗಿ ಭೂರಹಿತ ಮತ್ತು ಅತಿ ಸಣ್ಣ ರೈತರು ಪಶುಸಂಗೋಪನೆ ಮೀನು ಉತ್ಪಾದನೆಯ ಮೂಲಕ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಯನ್ನು ಸ್ಥಾಪನೆಗೆ ಕ್ರಮ ಕೈಗೊಂಡಿದೆ. ನಾಗರಿಕರು ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಸಂಸ್ಕೃತಿ, ಸಭ್ಯತೆಗೆ ವಿಶ್ವದಲ್ಲಿ ಉನ್ನತ ಸ್ಥಾನವಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಆತ್ಮ ನಿರ್ಭರ್ ಭಾರತ ಮತ್ತು ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ಯುವ ಪೀಳಿಗೆಗಳ ನಿಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳನ್ನುದೇಶಿಸಿ ಹೇಳಿದರು