ಬೆಂಗಳೂರು : ಅತ್ಯಾಚಾರದಂತಹ ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆಯಿಂದ ಮಾತನಾಡಿ ಎಂದು ಸಂಪುಟ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರ. ಹೀಗಾಗಿ ಈ ಪ್ರಕರಣದ ಬಗ್ಗೆ ಮಾತಾಡುವಾಗ ಎಚ್ಚರವಿರಲಿ. ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾತಾಡಿ ಗೊಂದಲ ಮಾಡ್ಕೊಬೇಡಿ. ಈ ರೀತಿ ಘಟನೆ ಆದಾಗ ವಿಪಕ್ಷದವರು ಟೀಕೆ ಮಾಡೋದು ಸಹಜ. ಹಾಗಂತ ಏನೋ ಮಾತಾಡಿ, ಗೊಂದಲ ಮಾಡ್ಕೊಳ್ಳೋದು ಬೇಡ. ಅತ್ಯಾಚಾರ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ ಎಂದು ಹೇಳಿದ್ದಾರೆ.
ನಿಮ್ಮ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿದ್ದು, ಪ್ರಕರಣದ ವಿವರ ಪಡೆಯಿರಿ. ಅನಾವಶ್ಯಕವಾಗಿ ಮಾತಾಡಿ ಗೊಂದಲಕ್ಕೀಡಾಗಬೇಡಿ. ಈಗಾಗಲೇ ಗೃಹ ಸಚಿವರು ಸ್ಥಳಕ್ಕೆ ಹೋಗಿದ್ದಾರೆ. ನೀವು ಕೂಡ ಹೋಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ಗೆ ಸಿಎಂ ಸೂಚನೆ ನೀಡಿದರು. ಸಿಎಂ ಸೂಚನೆ ಹಿನ್ನೆಲೆ ಇದೀಗ ಹಾಲಪ್ಪ ಆಚಾರ್ ಮೈಸೂರಿಗೆ ತೆರಳಿದರು.