ವಿಜಯಪುರ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ವಿಜಯಪುರ ತಾಲೂಕಿನ ಜುಮನಾಳ ಬಳಿ ಅಪಘಾತಕ್ಕೀಡಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ಬಿಜೆಪಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾಧ್ವಿ: ಇಂದು ನಗರದಲ್ಲಿ ಮಹಿಳಾ ಸಮಾವೇಶ ಸೇರಿದಂತೆ ಹಲವಾರು ಕಾರ್ಯಕ್ರಮಗಲ್ಲಿ ಭಾಗಿಯಾಗಿ ಸಂಜೆ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ನಗರ ಹೊರವಲಯದ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ೫೦ರ ಜುಮನಾಳ ಬಳಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ.
ಸಣ್ಣಪುಟ್ಟ ಗಾಯ ಅಪಾಯದಿಂದ ಪಾರಾದ ಕೇಂದ್ರ ಸಚಿವೆ: ಅಪಘಾತದ ತೀವ್ರತೆ ಕಡಿಮೆ ಇದ್ದ ಪರಿಣಾಮ ಈ ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಕೇಂದ್ರ ಸಚಿವೆ ಸಾದ್ವಿ ನಿರಂಜನಾ ಜ್ಯೋತಿ ಹಾಗೂ ಕಾರ್ ಚಾಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸರ ಮಾಹಿತಿ ನೀಡಿದ್ದು, ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಜಿಲ್ಲಾಸ್ಪತ್ರೆಯಲ್ಲಿ ಸಚಿವೆಗೆ ಸಿಟಿ ಸ್ಕ್ಯಾನಿಂಗ್: ಅಪಘಾತ ಬಳಿಕ ಸಾಧ್ವಿ ನಿರಂಜನ ಜ್ಯೋತಿ ಅವರನ್ನ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಸಿಟಿ ಸ್ಕ್ಯಾನ್ ಮಾಡಲಾಗಿದೆ. ತಲೆ ಹಾಗೂ ಬಲಗಾಲಿಗೆ ಪೆಟ್ಟಾಗಿದೆ. ಹೀಗಾಗಿ ಎಲುಬಿಗೆ ಸಮಸ್ಯೆ ಉಂಟಾಗಿದೆಯಾ, ತೀವ್ರತರವಾದ ಒಳಪೆಟ್ಟು ಉಂಟಾಗಿದೆಯಾ ಎನ್ನುವ ಬಗ್ಗೆ ಸ್ಕ್ಯಾನ್ ಮಾಡಲಾಗಿದೆ. ಜೊತೆಗೆ ಸಾಧ್ವಿ ಅವರ ಡ್ರೈವರ್ ತಲೆಗೆ ಪೆಟ್ಟು ಬಿದ್ದಿದ್ದು ಸಿಟಿ ಸ್ಕ್ಯಾನ್ ಮಾಡಲಾಗಿದೆ.
ಕೇಂದ್ರ ಸಚಿವೆಯ ಕಾಳಜಿ ತೆಗೆದುಕೊಂಡ ಉಮೇಶ ಕಾರಜೋಳ: ಇತ್ತ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವ ವೇಳೆಯು ಉಮೇಶ ಕಾರಜೋಳ ಕೇರ್ ತೆಗೆದುಕೊಂಡ್ರು. ಮಧ್ಯಾಹ್ನ ವಿಜಯಪುರ ನಗರದಲ್ಲಿ ನಡೆದ ನಾಗಠಾಣ ಕ್ಷೇತ್ರದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಾಧ್ವಿ ಅವರ ಜೊತೆಗೆ ಉಮೇಶ ಕಾರಜೋಳ, ಗೋಪಾಲ್ ಕಾರಜೋಳ ಸಹ ಪಾಲ್ಗೊಂಡಿದ್ದರು.