ವಿಜಯಪುರ : ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಲ್ಲಿದ್ದಾಗಲೇ ಬಂಧನ ಮಾಡಿ ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ಸಂಜೆ ನಡೆದ ಬಸವನ ಬಾಗೇವಾಡಿ ವಿಧಾನಸಭೆ ಮತಕ್ಷೇತ್ರದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಬಾಂಡ್ ಹೆಸರಲ್ಲಿ ಬಿಜೆಪಿ ಪಕ್ಷ ಆರು ಸಾವಿರ ಕೋಟಿ ರೂ.ಸಂಗ್ರಹಿಸಿದ್ದು ಯಾವ ಲೆಕ್ಕವೂ ಇಲ್ಲ, ಒಬ್ಬರ ಬಂಧನವೂ ಇಲ್ಲ. ಆದರೆ, ಅಬಕಾರಿ ಹಗರಣದ ನೆವದಲ್ಲಿ ಕೇವಲ ನಾನೂರು ಕೋಟಿ ಅವ್ಯವಹಾರದ ಮೇಲೆ ಇಡಿ ಮುಖಾಂತರ ಕೇಜ್ರಿವಾಲರನ್ನು ಬಂಧಿಸಲಾಗಿದೆ. ಇದೆಲ್ಲ ಜನ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಮತ ಕೇಳುತ್ತಿದೆ. ಆದರೆ ಬಿಜೆಪಿ ಬರೀ ಅನಗತ್ಯ ವಿಷಯಗಳ ಬೆನ್ನು ಬಿದ್ದಿದೆ. ಬಾಗಲಕೋಟ ಹಾಗೂ ವಿಜಯಪುರ ಲೋಕಸಭೆಗೆ ಕಾಂಗ್ರೆಸ್ ಪಕ್ಷದವರು ಆರಿಸಿ ಬಂದರೆ ಆಲಮಟ್ಟಿ ಅಣೆಕಟ್ಟು ಎತ್ತರಿಸಿ ಎರಡೂ ಜಿಲ್ಲೆಗೆ ಸಂಪೂರ್ಣ ನೀರಾವರಿ ಮಾಡಲಾಗುತ್ತದೆ. ಈ ಸಲ ಬದಲಾವಣೆ ಮಾಡಿ, ರಾಜು ಆಲಗೂರರನ್ನು ಗೆಲ್ಲಿಸಿ ಎಂದು ಕೇಳಿಕೊಂಡರು.
ಈರಣ್ಣ ಪಟ್ಟಣಶೆಟ್ಟ ಪ್ರಾಸ್ತಾವಿಕ ಮಾತನಾಡಿದರು. ಶೇಖರಗೌಡ ಪಾಟೀಲ ಸ್ವಾಗತಿಸಿದರು. ಭಾಗ್ಯರಾಜ ಸೊನ್ನದ ನಿರೂಪಿಸಿದರು. ಶರಣಪ್ಪ ಬಳ್ಳಾ, ಬಸವರಾಜ ಜಾಲಗೇರಿ, ಕಲ್ಲು ದೇಸಾಯಿ ಕೊಲ್ಹಾರ, ತಾನಾಜಿ ನಾಗರಾಳ, ಶಿವನಗೌಡ ಗುಜಗೊಂಡ, ರಾಜಣ್ಣ ಪಾಟೀಲ, ಆರ್.ಎನ್. ಸೂಳಿಬಾವಿ, ಎಮ್.ಜಿ. ಪಡಗಾನೂರ, ಶೇಖರ ಗೊಳಸಂಗಿ, ಸಿ.ಎಚ್. ಗಿಡ್ಡಪ್ಪಗೊಳ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಮಿಣಿ, ಮುಸ್ಕಾನ್, ಬಸವರಾಜ ಸೋಮಪುರ, ಮಲ್ಲನಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಎಸ್.ಬಿ. ಪತಂಗಿ, ಬಿಎಸ್ ಕಲ್ಲೂರ, ಮಲ್ಲಪ್ಪ ಬಾಗೇವಾಡಿ, ಅಣ್ಣಾರಾಯ ಪಾಟೀಲ, ಮಹ್ಮದ ಹನೀಫ್ ಪತಂಗಿ, ರಾಜುಗೌಡ ಪಾಟೀಲ, ಭರತ್ ಅಗರವಾಲ್, ನಾಗನಗೌಡ ಹಂಗರಗಿ, ಸುಭಾಶ ಉಕ್ಕಲಿ, ವಿಶ್ವನಾಥಗೌಡ ಪಾಟೀಲ, ಸಾಹೇಬಗೌಡ ಪಾಟೀಲ, ಸಲೀಂ ನಾಗಠಾಣ, ಚನ್ನಪ್ಪಗೌಡ ಬಿರಾದಾರ ಅನೇಕರಿದ್ದರು.
..
ಬಾಕ್ಸ್
ಬಿಜೆಪಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.
ಒಂದೇ ಒಂದು ಪ್ರಶ್ನೆ ಕೇಳದೆ, ಯಾವ ಅಭಿವೃದ್ಧಿಯೂ ಮಾಡದೇ ಇರುವ ಬಿಜೆಪಿ ಅಭ್ಯರ್ಥಿಗೆ ಮತ ಕೇಳುವ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಬಗೆಯಿಂದಲೂ ಅಭಿವೃದ್ಧಿ ಕೆಲಸ ಮಾಡಿದೆ. ಕೇಂದ್ರದಲ್ಲೂ ಅಧಿಕಾರ ನೀಡಿದರೆ, ಎರಡೂ ಕಡೆ ನಮ್ಮದೇ ಸರಕಾರವಾಗಿ ಇನ್ನಷ್ಟು ಕೆಲಸಗಳು ಸಾಧ್ಯವಾಗಲಿವೆ. ಬಿಜೆಪಿಯ ಸುಳ್ಳಿನ ಕಾಯಕ ಬಹಳ ದಿನ ನಡೆಯುವುದಿಲ್ಲ. ಜಿಲ್ಲೆ ಇವರ ಅಧಿಕಾರಾವಧಿಯಲ್ಲಿ ಯಾವ ಅಭಿವೃದ್ಧಿ ಕಂಡಿಲ್ಲ. ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.