ವಿಜಯಪುರ: ಮರಾಠಾ ಸಮುದಾಯದ ಹಿತ ಕಾಪಾಡುವ ಪಕ್ಷಕ್ಕೆ ನೀವು ಮತ ನೀಡಿ ಎಂದು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಐಶ್ವರ್ಯ ನಗರದಲ್ಲಿರುವ ಮರಾಠಾ ಭವನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಮೊದಲಿಂದಲೂ ಮರಾಠಿಗರನ್ನು ಗೌರವಿಸಿದೆ. ಪ್ರಾತಿನಿಧ್ಯ ನೀಡುತ್ತ ಬಂದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಟಿಕೆಟ್ ನೀಡಿದೆ. ಓದಿ, ಮಾಹಿತಿ ಪಡೆದು ನಮ್ಮ ಯುವಕರು ಮತ ಚಲಾಯಿಸಬೇಕು. ಬಿಜೆಪಿಯ ಸುಳ್ಳು, ಭ್ರಮೆಗಳಿಂದ ಹೊರಬರಬೇಕು ಎಂದು ಹೇಳಿದರು. ಮೋದಿ ಸರಕಾರ ಬಂದ ಮೇಲೆ ಭಾರತ ಅನೇಕ ವಿಷಯಗಳಲ್ಲಿ ಬಾಂಗ್ಲಾದೇಶಕ್ಕಿಂತ ಕನಿಷ್ಠವಾಗಿದೆ. ನಮ್ಮ ಮಕ್ಕಳಿಗೆ ಉದ್ಯೋಗವಿಲ್ಲ, ಬಿಜೆಪಿ ನಾಯಕರ ಮಕ್ಕಳು ಮಾತ್ರ ಫಾರಿನ್ನಲ್ಲಿ ಓದುತ್ತಿದ್ದಾರೆ. ಎಲ್ಲಿಯವರೆಗೆ ವಾಸ್ತವ ತಿಳಿಯುವುದಿಲ್ಲವೋ ಅಲ್ಲಿಯ ತನಕ ನಮಗೆ ಭವಿಷ್ಯವಿಲ್ಲ.
ಇವರು ಮಾಡಿದ ಸಾಲ ಎಷ್ಟು ಅಂತ ಯೋಚಿಸಿ, ನಮ್ಮ ಪಕ್ಷ ಮಾಡಿರುವ ಅಭಿವೃದ್ಧಿ ಕಾರ್ಯಗಳ ಲೆಕ್ಕ ಹಾಕಿ. ಶಿಕ್ಷಣ, ಮಕ್ಕಳ ಸ್ಕೂಲ್ ಬ್ಯಾಗ್ ಮೇಲೂ ತೆರಿಗೆ ಹಾಕಿದ ಘನ ಸರಕಾರ ಇವರದು. ಇವರಿಂದ ಉದ್ಯಮಪತಿಗಳ ಹಣ ಡಬಲ್ ಆಯಿತು. ಆದರೆ ನಾವು ಬಡವರಾಗೇ ಉಳಿದಿದ್ದೇವೆ. ಇದರ ಬಗ್ಗೆ ಯಾರು ಮಾತನಾಡುತ್ತಾರೆ ಎಂದು ಕೇಳಿದರು.
ನಾವು ಬಿಜೆಪಿ, ಸಂಘ ಪರಿವಾರದ ಹಿಂದೂಗಳಲ್ಲ. ಶಿವಾಜಿ ಮಹಾರಾಜರ ವಂಶಸ್ಥರಾದ ನಾವುಗಳು ನಿಜವಾದ ಹಿಂದೂಗಳು. ಭಾರತೀಯ ಹಿಂದೂಗಳಾಗಿದ್ದೇವೆ. ಮೋದಿಯವರು ಬರುವ ಮುಂಚೆಯೇ ದೇಶ ಕಟ್ಟಿದ್ದು ಕಾಂಗ್ರೆಸ್. ದೇಶವನ್ನು ಸುಭದ್ರಗೊಳಿಸಿದ್ದು ನಮ್ಮ ಪಕ್ಷ. ಹಾಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡಿ ಎಂದು ಕೋರಿದರು.
ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಪಕ್ಷ ಗೆದ್ದಿಲ್ಲ. ಈ ಸಲ ಗೆಲ್ಲಲೇಬೇಕಿದೆ. ವಿಪಕ್ಷವನ್ನು ಟೀಕಿಸುವ ಬದಲು ನಾವು ಏನು ಮಾಡುತ್ತೇವೆ ಎನ್ನುವುದು ಮುಖ್ಯ. ನಮ್ಮ ಮೇಲೆ ಭರವಸೆ ಇಟ್ಟರೆ ಅದಕ್ಕೆ ಪೂರಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಮತ ನೀಡುವ ಮುನ್ನ ವಿಚಾರ ಮಾಡಿ. ಮೋದಿಯವರಿಗೆ ಹಾಕುವೆ ಎಂದು ಮತ ಚಲಾಯಿಸಿದರೆ ಸದ್ಯ ಆಗುವುದಿಲ್ಲ. ಅವರು ನಿಮಗೆ ಏನು ಮಾಡಿದ್ದಾರೆ ಅಂತ ಅವಲೋಕಿಸಿಕೊಳ್ಳಿ. ಹಿಂದೂ ಸಮಾಜಕ್ಕೆ ಅವರ ಕೊಡುಗೆ ಏನಿದೆ. ದೇಶ ಅವರಿಂದ ಎತ್ತ ಸಾಗಿದೆ ಎಂದು ವಿಶ್ಲೇಷಣೆ ಮಾಡಿ ಕಾಂಗ್ರೆಸ್ಗೆ ಮತ ನೀಡಿ ಎಂದು ಕೋರಿದರು. ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಹಿರಿಯರಾದ ಜ್ಯೋತಿಬಾ ಹಿಟ್ನಳ್ಳಿ, ಮಧು ಸಾಹುಕಾರ, ವೀಕ್ಷಕಿ ರುಕ್ಸಾನಾ ಉಸ್ತಾದ, ಸಂತೋಷ ಪವಾರ್, ಸದಾಶಿವ ಪವಾರ, ಬಿ.ಬಿ. ಶಿವಾಳ್ಕರ್, ಚಂದ್ರಕಾಂತ ಪವಾರ, ಮಹಾದೇವ ಅನೇಕರಿದ್ದರು.