ವಿಜಯಪುರ: ಶಬರಿಮಲೆ ಅಯ್ಯಪ್ಪ ಕೋಟಿ ಕೋಟಿ ಹಿಂದುಗಳ ಆರಾಧ್ಯ ದೈವ. ಇಂತಹ ದೇವರಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಕರಣ ನಡೆದಿದೆ. ಈ ಹಿಂದೆ ಇಂತಹದ್ದೇ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಮತ್ತೆ ಅದೇ ಚಾಳಿ ಮುಂದುವರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಯ್ಯಪ್ಪ ಮಾಲಾಧಾರಿಗಳು ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಗೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸಿಂದಗಿಯ ಜಗದೀಶ್ ಕಲಬುರ್ಗಿ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಅಯ್ಯಪ್ಪ ಸ್ವಾಮಿ ಹುಟ್ಟಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ. ಸದ್ಯ, ಅಯ್ಯಪ್ಪ ಸ್ವಾಮಿ ಬಗ್ಗೆ ಅಪಮಾನ ಮಾಡಿದ ಆರೋಪಿ ಜಗದೀಶ ಕಲಬುರ್ಗಿ ವಿರುದ್ಧ ಆಕ್ರೋಶಗೊಂಡಿರುವ ಮಾಲಾಧಾರಿಗಳು ಸಿಂದಗಿ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಅಯ್ಯಪ್ಪ ಸ್ವಾಮೀ ಹುಟ್ಟಿನ ಬಗ್ಗೆ ಅವಮಾನಕಾರಿಯಾಗಿ ಪೋಸ್ಟ್ ಮಾಡಿರುವ ಜಗದೀಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀ ಧರ್ಮಶಾಸ್ತ್ರ ಸೇವಾ ಸಮೀತಿಯಿಂದ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.