ವಿಜಯಪುರ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವ ಭರವಸೆಯಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಾಯತ್ ರಾಜ್ ಬಲಗೊಳಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿಜಿ ಬಯಸಿದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಎಂದರು.
ಮೋದಿ ಅವರ ಏಳು ವರ್ಷಗಳ ಅಭಿವೃದ್ಧಿ ಕಾರ್ಯ, ಬಿ.ಎಸ್. ಯಡಿಯೂರಪ್ಪನವರ ಜನಪರ ಯೋಜನೆಗಳನ್ನು ಮುಂದಿಟ್ಟು ಮತಯಾಚನೆ ಮಾಡಲಾಗುತ್ತಿದೆ. 56 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಗ್ರಾಮ ಸ್ವರಾಜ್ಯದ ಕನಸಿನ ನನಸು ಆಗಿಲ್ಲ. ಸದ್ಯ ಮೋದಿ ಆಡಳಿತ ಸಶಕ್ತವಾಗಿ ಕ್ರೀಯಾಯೋಜನೆ ರೂಪಿಸಿ, ಪಂಚಾಯತ್ ರಾಜ್ ಬಲಗೊಳಿಸಲಾಗುತ್ತಿದ್ದು, ಜಲ ಜೀವನ ಮಿಷನ್ ಜಾರಿಗೊಳಿಸಲಾಗಿದ್ದು, 8500 ಕೋಟಿ ರೂ. ಮೊದಲ ಕಂತಾಗಿ ಬಿಡುಗಡೆ ಮಾಡಲಾಗಿದೆ ಎಂದರು.
ದೀನ ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ಇದ್ದಾರೆ ಎಂದು ಅವರು ಭ್ರಮೆಯಲ್ಲಿದ್ದಾರೆ. ಅವರೆಲ್ಲ ಕೈ ಬಿಟ್ಟಿದ್ದರಿಂದಲೇ ಎಲ್ಲ ಕಡೆ ಕಾಂಗ್ರೆಸ್ ಸೋಲು ಅನುಭವಿಸುತ್ತಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗುವ ಕಾಲ ದೂರವಿಲ್ಲ ಎಂದರು.
ಅವಳಿ ಜಿಲ್ಲೆ ವಿಜಯಪುರ- ಬಾಗಲಕೋಟಯಲ್ಲಿ 4300 ಬಿಜೆಪಿ ಬೆಂಬಲಿತ ಮತಗಳಿದ್ದು, ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ ಮೊದಲ ಪ್ರಾಶಸ್ತ್ಯ ಮತಗಳಿಂದ ಗೆಲವು ಸಾಧಿಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಮಾತು ಅಪ್ರಸ್ತುತ, ಮಳೆ, ಕೊರೋನಾ ಸಂಕಷ್ಟಗಳಿಗೆ ನಮ್ಮ ಆದ್ಯತೆ ಹೊರತು, ಕುರ್ಚಿಗಾಗಿ ಅಲ್ಲ. ಉತ್ತಮ ಆಡಳಿತ ನೀಡುವ ಹಂಬಲ ನಮ್ಮದಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲು ಗೆಜೆಟ್ ಆಗಬೇಕ. ಅಲ್ಲದೇ, ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಕರಣಗೊಳಿಸಲು ವಿಳಂಬವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ವಿಧಾನ ಪರಿಷತ್ ಅಭ್ಯರ್ಥಿ ಪಿ.ಎಚ್.ಪೂಜಾರ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಚಂದ್ರಶೇಖರ ಕವಟಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.