ವಿಜಯಪುರ: ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಸೇರಿ ಎಲ್ಲ ನಿರ್ಧಾರ ಮೇ 10 ರ ಒಳಗೆ ಆಗಬಹುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನರ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿಗಳು ವಿದೇಶ ಪ್ರವಾಸದಿಂದ ಆಗಮಿಸಿದ ಬಳಿಕ ನಿರ್ಧಾರವಾಗಲಿದೆ ಎಂದರು.
ರಾಜ್ಯದಲ್ಲಿ ಆಗಿರುವ ಬೆಳವಣಿಗೆ, ಆರೋಪಗಳಿಗೆ ಸೂಕ್ತ ಪರಿಹಾರಕ್ಕಾಗಿ ರಾಷ್ಟ್ರೀಯ ನಾಯಕರು ಬಂದಿದ್ದಾರೆ. ಎರಡು ದಿನದ ಒಳಗೆ ಪ್ರಧಾನಿ ವಾಪಾಸ್ ಆಗಲಿದ್ದಾರೆ. ಅಂತಿಮವಾಗಿ ಪ್ರಧಾನಿಗಳು ನಿರ್ಣಯ ಮಾಡಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರವಾಗಲಿದೆ. ಈಗಾಗಲೇ ಎಲ್ಲ ವರದಿಗಳನ್ನ ತೆಗೆದುಕೊಂಡಿದ್ದಾರೆ. ದಿಲ್ಲಿಯಲ್ಲಿ ಹೈ ಪವರ್ ಮೀಟಿಂಗ್ ಆಗಿದೆ. ಈ ಮೀಟಿಂಗ್ ಸಂದೇಶ ಏನಿದೆ ಗೊತ್ತಿಲ್ಲ ಎಂದರು.
ಕರ್ನಾಟಕ ದೃಷ್ಟಿಯಿಂದ ಒಳ್ಳೆಯ ನಿರ್ಣಯ ಆಗಲಿದೆ. ಪಾರ್ಟಿ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಪ್ರಧಾನಿಗಳು ತೆಗೆದುಕೊಳ್ಳಲಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಪ್ರಧಾನಿ ನಿರ್ಣಯಿಸಲಿದ್ದಾರೆ ಎಂದರು.
ಸಿಎಂ ಬದಲಾವಣೆ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರಿಗೆ ಬಿಜೆಪಿ ಬಗ್ಗೆ ಭಯ ಇದೆ. ಮತ್ತೊಬ್ಬರು ಸಿಎಂ ಬಂದು ಬಿಟ್ಟರೇ ಮತ್ತೆಲ್ಲಿ ಜೈಲಿಗೆ ಹೋಗಬೇಕಾಗುತ್ತೋ ಎನ್ನುವ ಭಯ. ಡಿಕೆಶಿಗೆ ಜೈಲಿನ ಭಯ, ಸಿದ್ದರಾಮಯ್ಯಗೆ ಸಿಎಂ ಆಗೊಲ್ಲ ಎನ್ನುವ ಭಯ ಇದೆ ಎಂದರು.
ಅಮಿತ್ ಶಾ ರಾಜ್ಯಕ್ಕೆ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಸಿದ್ಧತೆಗೆ ಅಮಿತ್ ಶಾ ಬಂದಿದ್ದಾರೆ. ಸಭೆ ನಡೆಸಿ ಮುಂದಿನ ಚುನಾವಣೆಯ ತಯಾರಿ ಮಾಡಲಿದ್ದಾರೆ ಎಂದರು.