ವಿಜಯಪುರ : ಸಿಂದಗಿ ಮತ್ತು ಹಾನಗಲ್ಗಳಲ್ಲಿ ನಡೆಯುವ ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು ತೀರಾ ಕೆಳಮಟ್ಟದಲ್ಲಿ ಪ್ರಚಾರಕ್ಕಿಳಿದ ಬಳಿಕ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ನಡುವೆ ಪರಸ್ಪರ ಟೀಕಾದಾಳಿಗಳು ತೀವ್ರಗೊಂಡಿತು. ಈ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಹಲವು ಬಿಜೆಪಿ ನಾಯಕರು ಮಾತ್ರ ಪ್ರಚಾರದ ವೇಳೆ ವೈಚಾರಿಕತೆಯಿಂದ ಪ್ರಚಾರ ಕೆಳಕ್ಕಿಳಿಯಲು ಅವಕಾಶ ನೀಡದಿದ್ದುದು, ಈ ಚುನಾವಣಾ ಪ್ರಚಾರದಲ್ಲಿ ಗಮನ ಸೆಳೆದ ಅಂಶವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಜಾತೀಯ , ಮತೀಯ ಅಂಶಗಳನ್ನು ಮುಂದೊತ್ತಿ ಮತ ಸೆಳೆಯಲು ವಿವಿಧ ತಂತ್ರಗಳನ್ನು ನಡೆಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ತಿರುಗೇಟು ನೀಡುತ್ತಿದ್ದ ವೇಳೆಯಲ್ಲೂ ವೈಚಾರಿಕೆತೆ ಮತ್ತು ನೈತಿಕ ಮಟ್ಟ ಕಾಯ್ದುಕೊಳ್ಳಲು ಕಾಳಜಿ ವಹಿಸಿದ್ದು ವಿಶೇಷವಾಗಿತ್ತು.
ಕಂಬಳಿ ವಿಷಯ , ಆರೆಸ್ಸೆಸ್ ನಿಂದೆಯಂತಹ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರ ಸ್ವಾಮಿ ಅವರ ತಂತ್ರಗಳಿಗೆ ಬೊಮ್ಮಾಯಿ ಅವರು ಉತ್ತರ ನೀಡಿದ್ದು, ಈ ಸಂದರ್ಭ ವೈಚಾರಿಕತೆಗಿಂತ ಕೆಳಗಿಳಿಯದೆ ಮೇಲ್ಪಂಕ್ತಿ ತೋರಿದ್ದು ಜನತೆಯ ಗಮನ ಸೆಳೆದಿರುವ ಅಂಶವಾಗಿದೆ.
ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಾ ಬಿಜೆಪಿ ವೈಚಾರಿಕ ನೆಲೆಯಲ್ಲಿ ಯಾವುದೇ ಟೀಕೆಗಳನ್ನು ಎದುರಿಸಲು ಸಿದ್ಧವಿದೆ. ಆದರೆ ಇದು ಕೀಳುಮಟ್ಟಕ್ಕೆ ಇಳಿಯಲು ಅವಕಾಶ ನೀಡುವುದಿಲ್ಲ ಎಂಬುದನ್ನು ತಮ್ಮ ಉತ್ತರಗಳಿಂದಲೇ ವ್ಯಕ್ತಗೊಳಿಸಿದರು.
ಮುಸ್ಲಿಮರ ಮತ ಗಳಿಸಲು ಆರೆಸ್ಸೆಸ್ಸನ್ನು ಟೀಕಿಸುವುದು ಸುಲಭದ ದಾರಿ ಎಂದು ಕಂಡುಕೊಂಡಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು , ಆರೆಸ್ಸೆಸ್ ನಿಂದೆಯಲ್ಲಿ ಪೈಪೋಟಿಗಿಳಿದರು. ಸಿದ್ದರಾಮಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಕ್ಯುಲರ್ ಹೆಸರಿನಡಿಯಲ್ಲೇ ಜಾತೀಯವಾದವನ್ನೂ ಪ್ರಚಾರದಲ್ಲಿ ತುರುಕಿದರು. ಆದರೆ ಉಭಯ ಕ್ಷೇತ್ರಗಳ ಮತದಾರರು ಈ ಬಾರಿಯ ಪ್ರಚಾರದ ವೈಖರಿಯನ್ನು ಗಮನಿಸಿದ್ದು, ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.