ವಿಜಯಪುರ: ಭೀಮಾತೀರದ ಸಿಂದಗಿ ಉಪ ಚುನಾವಣೆಯ ಅಬ್ಬರ ತಾರಕ್ಕಕ್ಕೇರಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಎರಡನೇ ಬಾರಿಗೆ ಮತಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದು, ಚುನಾವಣಾ ಕಣ ಹೈವೋಲ್ಟೇಜ್ ಆಗಿ ಪರಿವರ್ತನೆಗೊಂಡಿದೆ.
ಸಿಂದಗಿ ಮತಕ್ಷೇತ್ರದ ಕೊನ್ನೊಳ್ಳಿಯಿಂದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರೆದ ವಾಹನದ ಮೂಲಕ ರೋಡ್ ಶೋ ಆರಂಭಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಸಾಕ್ಷಿಯಾದರು. ತಮ್ಮ ನಾಡಿನ ದೊರೆಯನ್ನು ನೋಡಲು ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು. ಕಾರ್ಯಕರ್ತರ, ಅಭಿಮಾನಿಗಳ ಕೇಕೇ, ಜಯಘೋಷ ಮುಗಿಲು ಮುಟ್ಟಿತ್ತು. ಬೈಕ್, ಕಾರ್ ಸೇರಿದಂತೆ ಇತರೆ ವಾಹನಗಳು ಮುಖ್ಯಮಂತ್ರಿ ವಾಹನವನ್ನು ಹಿಂಭಾಲಿಸುತ್ತಿದ್ದರು.
ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಂದಗಿ ಕ್ಷೇತ್ರದಲ್ಲಿ ವ್ಯಕ್ತವಾದ ಬೆಂಬಲ ನೋಡಿದ್ದರೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಖಚಿತ. ಬಿಜೆಪಿ ಗೋಣಿ ಚೀಲದಲ್ಲಿ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಹಣ ಹಂಚುವ ಕೆಲಸ ಮಾಡಿದ್ದು ಕಾಂಗ್ರೆಸ್. ಅವರು ಮಾಡಿದ್ದನ್ನು, ಅವರ ಅನುಭವವನ್ನು ಹೇಳುತ್ತಿದ್ದಾರೆ. ಗೋಣಿ ಚೀಲದಲ್ಲಿ ಹಣ ತಂದು ಹಂಚಿದವರು ಅವರು. ಸೋತ ಬಳಿಕ ಬಿಜೆಪಿ ಹಣ ಬಲದಿಂದ ಗೆದ್ದಿದೆ ಎಂದು ಆರೋಪಿಸುತ್ತಾರೆ. ಈ ಬಾರಿ ಸಿಂದಗಿ ಹಾಗೂ ಹಾನಗಲ್ ನಲ್ಲಿ ಸೊಲೋಕು ಮುಂಚೆಯೆ ಆರೋಪ ಶುರು ಮಾಡಿದ್ದಾರೆ ಎಂದು ಟೀಕಿಸಿದರು.
ಕಳೆದ ಬಾರಿ ದಿವಂಗತ ಎಂ.ಸಿ. ಮನಗೂಳಿ ಕಾಕಾ ಇದ್ದರು. ಅವರ ಮೇಲಿನ ಅನುಕಂಪದಿಂದ ನಿವೆಲ್ಲ ಅವರನ್ನು ಗೆಲ್ಲಿಸಿದ್ದೀರಿ. ಈ ಬಾರಿ ಅವರು ಇಲ್ಲ, ಬಿಜೆಪಿಯನ್ನು ಗೆಲ್ಲಿಸಿ. ನಾನು ಮುಖ್ಯಮಂತ್ರಿ ಆದಮೇಲೆ ಮೊದಲು ತೆಗೆದುಕೊಂಡ ನಿರ್ಧಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಸಾವಿರ ಕೋಟಿ ಕೊಟ್ಟಿದ್ದೇನೆ. ನಾನು ಬಡವರ, ದೀನ ದಲಿತರ ಪರವಾಗಿದ್ದೇನೆ. ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬಡವರು ಸೇರಿದಂತೆ ಎಲ್ಲ ವರ್ಗದ ಜನರ ಏಳ್ಗೇಗೆಯೇ ನಮ್ಮ ಗುರಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರಂತಹ ದೇಶಭಕ್ತ ಪ್ರಧಾನಿ ಮತ್ತೊಬ್ಬರಿಲ್ಲ. ರೈತರ ನಾಯಕ, ರೈತರ ಪರವಾಗಿ ಕೆಲಸ ಮಾಡಿದ ಬಿ.ಎಸ್. ಯಡಿಯೂರಪ್ಪನವರಂತಹ ಮತ್ತೊಬ್ಬ ನಾಯಕನಿಲ್ಲ. ಬಿ.ಎಸ್. ಯಡಿಯೂರಪ್ಪ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಸಿ.ಸಿ. ಪಾಟೀಲ, ಎನ್. ಮಹೇಶ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇದ್ದರು.