ಹರಿಹರ: ಉಕ್ರೇನ್ ಯುದ್ಧಭೂಮಿಯಲ್ಲಿ ಮೃತಪಟ್ಟಂತ ಚಳಗೇರಿಯ ನವೀನ್ ಪಾರ್ಥೀವ ಶರೀರ, ಬೆಂಗಳೂರಿನಿಂದ ಆಯಂಬುಲೆನ್ಸ್ ಮೂಲಕ ಸ್ವಗ್ರಾಮದತ್ತೆ ಆಗಮಿಸುತ್ತಿದೆ.
ಹರಿಹರದ ತಾಲೂಕು ಆಸ್ಪತ್ರೆಯಲ್ಲಿ ಅವರ ಮೃತ ದೇಹವನ್ನು ಶೀಲ್ಡ್ ಬಾಕ್ಸ್ ನಿಂದ ಕೋಲ್ಡ್ ಬಾಕ್ಸ್ ಗೆ ಶಿಫ್ಟ್ ಮಾಡಲಾಗಿದ್ದು, ಇನ್ನೇನು ಕೆಲವೇ ನಿಮಿಷದಲ್ಲಿ ನವೀನ್ ಸ್ವಗ್ರಾಮ ಚಳಗೇರಿಗೆ ಆಗಮಿಸಲಿದೆ.
21 ದಿನಗಳ ಹಿಂದೆ ಉಕ್ರೇನ್ ನಲ್ಲಿ ರಷ್ಯಾ ನಡೆಸಿದಂತ ಶೆಲ್ ದಾಳಿಯಲ್ಲಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದರು.
ಅವರ ಮೃತದೇಹವು ಇಂದು ತಾಯ್ನಾಡಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ, ಕುಟುಂಬಸ್ಥರು ಮೃತದೇಹವನ್ನು ಬರಮಾಡಿಕೊಂಡರು. ಈ ಬಳಿಕ, ಸ್ವಗ್ರಾಮ ಚಳಗೇರಿಗೆ ಆಯಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಯಿತು.
ಇದೀಗ ಹರಿಹರ ತಾಲೂಕು ಆಸ್ಪತ್ರೆಗೆ ತಲುಪಿದಂತ ನವೀನ್ ಮೃತದೇಹವನ್ನು ಶೀಲ್ಡ್ ಬಾಕ್ಸ್ ನಿಂದ ಕೋಲ್ಡ್ ಬಾಕ್ಸ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಂದ ಚಳಗೇರಿಯತ್ತ ಹೊರಟಿದ್ದು, ಕೆಲವೇ ನಿಮಿಷದಲ್ಲಿ ಸ್ವಗ್ರಾಮಕ್ಕೆ ಆಗಮಿಸಲಿದೆ.
ಇಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಳಿಕ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪೂಜೆಯನ್ನು ನವೀನ್ ಪಾರ್ಥೀವ ಶರೀರಕ್ಕೆ ಕುಟುಂಬಸ್ಥರು ಸಲ್ಲಿಸಲಿದ್ದಾರೆ. ಈ ನಂತ್ರ ಮೆರವಣಿಗೆ ನಡೆಸಿ, ಎಸ್ ಎಸ್ ಆಸ್ಪತ್ರೆಗೆ ನವೀನ್ ಪಾರ್ಥೀವ ಶರೀರವನ್ನು ದೇಹದಾನ ಮಾಡಲಿದ್ದಾರೆ.