ಹುಬ್ಬಳ್ಳಿ: ಕಿಮ್ಸ್ ವೈದ್ಯರ ವಿರುದ್ಧವೇ ಗಂಭೀರ ಆರೋಪವೊಂದು ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷಕ್ಕೆ ಮಹಿಳೆ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿ ಕಿಮ್ಸ್ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಡಗೋಡ ಮೂಲದ ಅನ್ನಪೂರ್ಣ ಶಂಕರ ಹುಲಿಯಾಳ್ ಎಂಬ ಮಹಿಳೆ ಸಾವನ್ನಪ್ಪಿದ್ದು, ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಆದರೆ ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರವಾಗಿ ಕುಟುಂಬದವರು ಆರೋಪಿಸಿದ್ದಾರೆ.
ಇನ್ನೂ ಕಿಮ್ಸ್ ನ ಸುಟ್ಟಗಾಯ ಹಾಗೂ ಪ್ಲಾಸ್ಟಿಕ್ ಶಾಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ, ಬಿಸಿ ಸಾಂಬಾರ್ ಮೈಮೇಲೆ ಬಿದ್ದ ಪರಿಣಾಮ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವಾರದಿಂದ ಮಹಿಳೆ ಆರೋಗ್ಯವಿದ್ದಳು. ಆದರೆ ಏಕಾಏಕಿ ಸಾವನ್ನಪ್ಪಿದ್ದಾಳೆ ಎನ್ನುತ್ತಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಏಕಾಏಕಿ ಮಹಿಳೆ ಮೃತ ಪಟ್ಟಿದ್ದು, ಇದು ವೈದ್ಯರ ನಿಷ್ಕಾಳಜಿ ಎಂದು ಆರೋಪಿಸಿದ ಕುಟುಂಬಸ್ಥರು ಕಿಮ್ಸ್ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.