ಹುಬ್ಬಳ್ಳಿ: ಸುಲಿಗೆ, ದರೋಡೆ ಮಾಡುತ್ತಿದ್ದ ರೌಡಿಶೀಟರ್ನ ಗಡಿಪಾರು ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಆದೇಶ ಹೊರಡಿಸಿದೆ.
ಅವಳಿನಗರ ವ್ಯಾಪ್ತಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳ ವಿರುದ್ಧ ಗಡಿಪಾರು ಮಾಡುವಂತಹ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಓರ್ವ ರೌಡಿಶೀಟರ್ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಸುಮಾರು ದಿನಗಳಿಂದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಳೇಹುಬ್ಬಳ್ಳಿ ಶಿವಶಂಕರ ಕಾಲೋನಿಯ ನಿವಾಸಿಯಾಗಿರುವ 25 ವರ್ಷದ ಅರ್ಜುನ ಪರಶುರಾಮ ಬುಗಡಿ, ಎಂಬಾತನನ್ನು ದಿನಾಂಕ 28.02.2024 ರಿಂದ 06 ತಿಂಗಳ ಅವಧಿಗೆ ತುಮಕೂರು ಜಿಲ್ಲೆಯ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ರೌಡಿಶೀಟರ್ನು ಆಟೋ ರಿಕ್ಷಾ ಓಡಿಸುತ್ತ ತನ್ನದೇ ಗುಂಪು ಕಟ್ಟಿಕೊಂಡು ಜನರಿಗೆ ಬೆದರಿಸಿ ಹಲ್ಲೆ ಮಾಡಿ ಸುಲಿಗೆ ಮಾಡುವುದು, ರಾತ್ರಿ ವೇಳೆ ಸಂಚರಿಸುವ ಲಾರಿ ಮತ್ತು ವಾಹನಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡುವುದು, ರೌಡಿಸಂ ತೋರಿಸುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಪ್ರವೃತ್ತಿಯನ್ನು ಹೊಂದಿದ್ದು, ಅವನ ಮೇಲೆ ಈಗಾಗಲೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿರುತ್ತದೆ. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೇ ಮತ್ತೆ ಸುಲಿಗೆ, ದರೋಡೆಗಳಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಈತನ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಈ ನಿಟ್ಟಿನಲ್ಲಿ ಗಡಿಪಾರು ಮಾಡಿ ಪೊಲೀಸ್ ಕಮೀಷನರೇಟ್ ಆದೇಶ ಹೊರಡಿಸಿದೆ.