ಹುಬ್ಬಳ್ಳಿ: ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಮುಂದುವರೆಸುತ್ತೇವೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವೋಟ್ ಬ್ಯಾಂಕ್ ರಾಜಕಾರಣ ಜನರಿಗೆ ಅರ್ಥವಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಸುಮಾರು 140 ಸೀಟಿಗಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ ಎಂಬುವ ಭರವಸೆ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸಾಕಷ್ಟು ಅವಮಾನ ಮಾಡಿದೆ. ಜಗಜೀವನರಾಮ್ ಅವರಿಗೂ ಕೂಡ ಸಾಕಷ್ಟು ಅವಮಾನ ಮಾಡಿದವರು ಈ ಕಾಂಗ್ರೆಸ್ಸಿಗರು. ಬಂಜಾರ ಸಮುದಾಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಎಸ್.ಸಿ, ಎಸ್.ಟಿ ಯಾವುದೇ ವರ್ಗದವರೂ ವಸತಿ ರಹಿತರಾಗಿ ಇರಬಾರದು ಅವರೆಲ್ಲರಿಗೂ ಸೂರನ್ನು ಕಲ್ಪಿಸುವ ಕಾರ್ಯವನ್ನು ಪ್ರಧಾನಮಂತ್ರಿ ಮಾಡುವ ಕನಸನ್ನು ಕಂಡಿದ್ದಾರೆ ಎಂದು ಅವರು ಹೇಳಿದರು.
ಸ್ಪೀಕರ್ ರಮೇಶಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಐವತ್ತು ವರ್ಷದಲ್ಲಿ ಜನರನ್ನು ಲೂಟಿ ಮಾಡಿದ್ದೀರಿ. ಕಾಂಗ್ರೆಸ್ ಲೂಟಿ ಮಾಡಿ ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.