ಧಾರವಾಡ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವೂ ಇರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಮುತ್ಸದ್ಧಿ ಹಾಗೂ ಹಿರಿಯ ರಾಜಕಾರಣಿ. ಅವರ ಮನೆ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಅದು ಒಪ್ಪುವಂತದ್ದೂ ಅಲ್ಲ ಎಂದರು.
ಯಡಿಯೂರಪ್ಪನವರ ಮನೆ ಮೇಲೆ ನಡೆದ ದಾಳಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಸದಾಶಿವ ಆಯೋಗದ ವರದಿಯನ್ನು ಯಾರು ವಿರೋಧ ಮಾಡುತ್ತಾರೋ ಅವರಿಗೆ ನಿನ್ನೆ ಸಿಎಂ ಅವರು ಕರೆದು ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿಯೂ ತಿಳಿ ಹೇಳಿದ್ದಾರೆ. ಎಲ್ಲರಿಗೂ ಒಪ್ಪುವಂತ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಮತ್ತೊಮ್ಮೆ ಸಂಬಂಧಿಸಿದವರನ್ನು ಕರೆದು ಎಲ್ಲರಿಗೂ ಅನುಕೂಲವಾಗುವಂತೆ ಮನವರಿಕೆ ಮಾಡುತ್ತಾರೆ ಎಂದರು.
ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ವಿನಂತಿ ಮಾಡುತ್ತೇನೆ. ಈಗಾಗಲೇ ಸಿಎಂ ಅವರು ಅಧಿಕಾರಿಗಳು ಮತ್ತು ಪ್ರಮುಖರನ್ನು ಕರೆದು ಸದಾಶಿವ ಆಯೋಗ ವರದಿ ಬಗ್ಗೆ ಮಾತನಾಡಿದ್ದಾರೆ. ಎಲ್ಲರೊಂದಿಗೂ ಚರ್ಚೆ ಮಾಡದ ಹೊರತು ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಯಡಿಯೂರಪ್ಪನವರ ಮನೆ ಮೇಲೆ ನಡೆದ ದಾಳಿ ಬಗ್ಗೆ ನಾನು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.