ನವಲಗುಂದ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದರೆ “ಅಲಿ ಬಾಬಾ ಮತ್ತು ನಲವತ್ತು ಕಳ್ಳರು” (ಅಲಿಬಾಬಾ ಔರ್ ಚಾಲೀಸ್ ಚೋರ್) ಇದ್ದಂಗೆ, ಕಳ್ಳರ ಮಾತಿಗೆ ಕಿವಿಗೊಡಬೇಡಿ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವಲಗುಂದ ವಿಧಾನ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಎಷ್ಟೇ ಬಾರಿ ಬಂದು ಸುಳ್ಳು, ಅಪಪ್ರಚಾರ ಮಾಡಿದರೂ ಅದಕ್ಕೆ ಬೆಲೆ ಕೊಡಬೇಡಿ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದು ಕೈ ಮುಗಿದು ಕೇಳಿದರು. ಪ್ರಧಾನಿಯವರು ಪ್ರವಾಹ ಬಂದಾಗ, ಕೋವಿಡ್ ಬಂದಾಗ ಜನರ ಸಮಸ್ಯೆ ಆಲಿಸಲು ರಾಜಕ್ಕೆ ಒಮ್ಮೆಯೂ ಬರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಕೇಂದ್ರದಲ್ಲಿ,ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ತಮ್ಮದೇ ಸರ್ಕಾರ ಇದ್ದರೂ ಮಹದಾಯಿ ಬಗ್ಗೆ ತುಟಿ ಬಿಚ್ಚಲಿಲ್ಲ. ಇಲ್ಲಿ ಬಂದು ಖರ್ಗೆಗೆ ಅಪಮಾನ ಮಾಡಲಾಗಿದೆ ಎಂದು ಕ್ಷುಲ್ಲಕ ಭಾಷಣ ಮಾಡಿದ್ದಾರೆ, ಮೋದಿಯವರಿಗೆ ಜವಾಬ್ದಾರಿ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಧ್ವನಿ ಯಾತ್ರೆ ಮಾಡುವ ಉದ್ದೇಶ ನಿಮ್ಮಸಲಹೆ, ಸೂಚನೆಗಳನ್ನು ಕೇಳುವುದಕ್ಕಾಗಿ, ನಿಮ್ಮ ಸಲಹೆ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ. ಕೊಟ್ಟ ಮಾತು ತಪ್ಪಲ್ಲ ಎಂದರು.
ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮಪ್ರಥಮ ಆದ್ಯತೆಯಾಗಿದ್ದು, ಈ ಕ್ಷೇತ್ರದಲ್ಲಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಆ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.