ನವಲಗುಂದ: ತಾಲೂಕಿನ ಕರ್ಲವಾಡ ಮತ್ತು ಕಾಲವಾಡ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ವಾಹನ ಎದುರಿಗೆ ಬರುತ್ತಿದ್ದ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಹುಬ್ಬಳ್ಳಿಯಿಂದ ಬರುತ್ತಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷದಿಂದ ವೇಗವಾಗಿ ಎದುರಿಗೆ ಬರುತ್ತಿದ್ದ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ ನಂತರ ಟಿಟಿ ವಾಹನಕ್ಕೂ ಡಿಕ್ಕಿ ಹೊಡೆದಿದೆ ಇದರಿಂದ ಸುಮಾರು 20 ಕ್ಕೂ ಹೆಚ್ಚು ಜನ ಗಾಯಗಳಾಗಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನೂ ಟಿಟಿ ವಾಹನ ಇಟಗಿ ಭೀಮಾಂಬಿಕೆ ದರ್ಶನ ಪಡೆದು ಮರಳಿ ತಮ್ಮ ಗ್ರಾಮವಾದ ಹುಬ್ಬಳ್ಳಿ ತಾಲೂಕಿನ ಗೋಪನಕೊಪ್ಪಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಲ್ಲದೇ ಗೂಡ್ಸ್ ವಾಹನ ಮಾಳವಾಡ ಗ್ರಾಮದ ರೈತ ಉಳ್ಳಾಗಡ್ಡಿಯನ್ನು ಹೇರಿಕೊಂಡು ಹುಬ್ಬಳ್ಳಿ ಎಪಿಎಂಸಿಗೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.