ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಶ್ವಾಪುರದ ಮುಖ್ಯ ರಸ್ತೆಯ ಪಕ್ಕ, ತ್ಯಾಜ್ಯ ಸಂಗ್ರಹದ ಕಾಂಪ್ಯಾಕ್ಟ್ ಸ್ಟೇಷನ್ ಎದುರು ಪ್ಲಾಸ್ಟಿಕ್ ಹಾಗೂ ಕಸದ ರಾಶಿಗೆ ಬೆಂಕಿ ಹಚ್ಚಿದ ಸ್ಥಳೀಯ ನಿವಾಸಿ ಮಹೇಶ್ವರಿ ಹಿರೇಮಠ ಅವರಿಗೆ ಪಾಲಿಕೆ ದಂಡ ವಿಧಿಸಿದೆ.
ಆರೋಗ್ಯ ನಿರೀಕ್ಷಕರ ನಿಷ್ಕಾಳಜಿ ಕುರಿತು, ವಲಯ ಕಚೇರಿ 6ರ ವ್ಯಾಪ್ತಿಯ ವಾರ್ಡ್ ನಂ. 45ರ ಆರೋಗ್ಯ ನಿರೀಕ್ಷಕಿ ನೀಲಮ್ಮ ಅಂಗಡಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 24 ಗಂಟೆಯೊಳಗೆ ಲಿಖಿತ ಉತ್ತರ ನೀಡಬೇಕು. ಇಲ್ಲವಾದರೇ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
‘ಕೇಶ್ವಾಪುರ ಮುಖ್ಯರಸ್ತೆಯ ಬೆಂಗೇರಿ ಕ್ರಾಸ್ ಬಳಿ ಮಹೇಶ್ವರಿ ಅವರು ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಅಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಹಾಗೂ ಕಸಕ್ಕೆ ಬೆಂಕಿ ಹಚ್ಚಿ ವಾತಾವರಣ ಹಾಳು ಮಾಡುತ್ತಿದ್ದರು. ಸಾರ್ವಜನಿಕರು ನೀಡಿದ್ದ ವಾಟ್ಸ್ಆ್ಯಪ್ ದೂರಿನ ಮೇರೆಗೆ, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಆರಿಸಲಾಗಿದೆ.
ಕಸಕ್ಕೆ ಬೆಂಕಿ ಹಚ್ಚಿದವರಿಂದ 200 ದಂಡ ಪಾವತಿಸಿಕೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕರ ಬೇಜವಾಬ್ದಾರಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಲಾಗಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ. ತಿಳಿಸಿದರು.