ಹುಬ್ಬಳ್ಳಿ: ಇದು ನನ್ನ ಕೊನೆಯ ಚುನಾವಣೆ, ಇದೊಂದು ಬಾರಿಗೆ ನನಗೆ ಅವಕಾಶ ಮಾಡಿಕೊಡಿ ಎಂದು ಕರಪತ್ರಗಳ ಮುಖಾಂತರವೇ ಜಗದೀಶ್ ಶೆಟ್ಟರ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಕರಪತ್ರಗಳಲ್ಲಿ ಇದು ನನ್ನ ಕೊನೆಯ ಚುನಾವಣೆ, ಮತ ನೀಡಿ ಆರಿಸಿ ತರಬೇಕು. ನಾನು ಓರ್ವ ಜನಪ್ರತಿನಿಧಿಯಾಗಿ ಅನೇಕ ಸಾಧನೆ ಮಾಡಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದೇನೆ ಎಂಬ ಅಪಪ್ರಚಾರ ಭರಾಟೆಯಿಂದ ಸಾಗಿದೆ. ಅದರ ಬಗ್ಗೆ ನಾನು ತೆಲೆ ಕೆಡಸಿಕೊಂಡಿಲ್ಲ. ನಾನು ಎಂದು ಕೂಡ ಅಧಿಕಾರಕ್ಕೆ ದುಂಬಾಲು ಬಿದ್ದಿಲ್ಲ. ರಾಜಕೀಯ ಜೀವನ ಆರಂಭದಿಂದಲೂ ತತ್ವ, ಸಿದ್ದಾಂತ ಆಧಾರದ ರಾಜಕಾರಣ ಮಾಡಕೊಂಡು ಬಂದವನು.ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿರ್ದಿಷ್ಟ ಉದ್ದೇಶಕ್ಕಾಗಿ. ಕುಲಗೆಟ್ಟು ಹೋಗುತ್ತಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಬೇಕಿದೆ. ಇದು ನನ್ನ ಕಟ್ಟ ಕಡೆಯ ಚುನಾವಣೆ, 7 ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ನಾನು ಗೆದ್ದೇ ಗೆಲ್ಲುತ್ತೇನೆ. ಈ ಅವಧಿ ಮುಗಿದ ಬಳಿಕ ಚುನಾವಣಾ ರಾಜಕಾರಣದಿಂದ ನಿರ್ಗಮಿಸುತ್ತೇನೆ ಎಂದು ಕರಪತ್ರದಲ್ಲಿ ಉಲ್ಲೇಖ ಮಾಡಿರುವ ಶೆಟ್ಟರ್, ನನ್ನ ಮಾತಿಗೆ ಕಟ್ಟಬದ್ಧನಾಗಿದ್ದೇನೆಂದು ವಿರೋಧಿಗಳಿಗೆ ರಾಜಕೀಯ ನಿವೃತ್ತಿ ಮುಖಾಂತರವೇ ಶೆಟ್ಟರ್ ಟಕ್ಕರ್ ನೀಡಿದ್ದಾರೆ.