ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ ನಂತರ ಈ ತನಿಖೆಯನ್ನು ಸಿಐಡಿ ತಂಡ ಚುರುಕುಗೊಳಿಸಿದೆ. ನೇಹಾ ಕೊಲೆ ಪ್ರಕರಣ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್ನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ, ಹಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಏಫ್ಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪಡೆದ ನ್ಯಾಯಾಲಯ ಆರು ದಿನ ಆರೋಪಿಯನ್ನು ಸಿಐಡಿಗೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಳಿಸಿವೆ.
ಫಯಾಜ್ನನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇವಲ ಆರು ದಿನಗಳ ಕಾಲ ಫಯಾಜ್ನನ್ನು ತಮ್ಮ ಕಸ್ಟಡಿಗೆ ಪಡೆದುಕೊಳ್ಳುವಂತೆ ಸಿಐಡಿಗೆ ನ್ಯಾಯಾಲಯ ಆದೇಶಿಸಿದ ನಂತರ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಬಂದ ಸಿಐಡಿ ಅಧಿಕಾರಿಗಳು, ಫಯಾಜ್ನನ್ನು ತಮ್ಮ ವಶಕ್ಕೆ ಪಡೆದರು.
ಕಾರಾಗೃಹದಿಂದ ಬಿಗಿ ಪೊಲೀಸ್ ಭದ್ರತೆ ಮಧ್ಯೆ ಫಯಾಜ್ನನ್ನು ಧಾರವಾಡದ ಡಿಎಆರ್ ಮೈದಾನದ ಬಳಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಸಿಐಡಿ ಅಧಿಕಾರಿಗಳು, ಅಲ್ಲಿ ಆತನ ವೈದ್ಯಕೀಯ ತಪಾಸಣೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಮುಂದೆಯೂ ಡಿಸಿಪಿ ರವೀಶ್ ಅವರ ನೇತೃತ್ವದಲ್ಲಿ ಭದ್ರತೆ ನೀಡಲಾಗಿತ್ತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆದ ನಂತರ ಫಯಾಜ್ನನ್ನು ಸಿಐಡಿ ಅಧಿಕಾರಿಗಳು ಮತ್ತೆ ಪೊಲೀಸ್ ಭದ್ರತೆಯೊಂದಿಗೆ ಹುಬ್ಬಳ್ಳಿಯತ್ತ ಕರೆದುಕೊಂಡು ಹೋದರು.