ನವಲಗುಂದ: ರೈತ ಸಂಘದ ಮುಖಂಡರು ನವಲಗುಂದ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ನಾನು ಬೆಂಬಲ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ತಾಲ್ಲೂಕಿನಲ್ಲಿ ನಡೆದಿದ್ದ ಪಂಚರತ್ನ ರಥಯಾತ್ರೆಯು ನವಲಗುಂದ ಪಟ್ಟಣಕ್ಕೆ ತಲುಪುತ್ತಿದ್ದಂತೆ ಕುಮಾರಸ್ವಾಮಿ ಅವರನ್ನು ಹೂಮಳೆ ಸುರಿಸುವ ಮೂಲಕ ಅಭಿಮಾನಿಗಳು ಬರಮಾಡಿಕೊಂಡರು. ಲಿಂಗರಾಜ ಒಡೆಯರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅವರು ನಂತರ ಬಹಿರಂಗ ಸಭೆಗೆ ಹಾಜರಾದರು. ಈ ಸಂದರ್ಭದಲ್ಲಿ ಸಾವಿತ್ರಿ ಪೂಜಾರ ಎಂಬ ನವಲಗುಂದದ ಮಹಿಳೆಯೊಬ್ಬರು ಕುಮಾರಸ್ವಾಮಿ ಅವರಿಗೆ ತುತ್ತುಣಿಸಿದರು.
ಬಳಿಕ ವೇದಿಕೆ ಭಾಷಣ ಮಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ‘ಬಿಜೆಪಿ ಸರ್ಕಾರದ ಮಹಾನುಭಾವರು ನಾನು ತಂದ ಕಾರ್ಯಕ್ರಮಗಳನ್ನು ಗಾಳಿಗೆ ತೂರಿದ್ದಾರೆ. ಅಷ್ಟೇ ಅಲ್ಲದೆ ನಾನು ತಂದ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ. ಕೊನೆಗಾಲದಲ್ಲಿ ಎಲ್ಲರೂ ನೆಮ್ಮದಿಯಿಂದ ಇರಬೇಕು. ರಾಜ್ಯದ ಬಡತನ ಹೋಗಲಾಡಿಸಲು ಹೊರಟಿದ್ದೆನೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಮತ ಹಾಕಿದರೆ ಏನೂ ಸಿಗಲ್ಲ. ಬಡವರಿಗೆ ಸಿಲಿಂಡರ್ ದರ ಹೆಚ್ಚಳ ಸಿಕ್ಕಿದೆ. ಹಿಂದೂ ಮುಸ್ಲಿಂ ಸಮಾಜ ನೆಮ್ಮದಿಯಿಂದ ಬದುಕಬೇಕು ಇನ್ನು ಎನ್.ಎಚ್.ಕೋನರಡ್ಡಿ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಅವರ ಬಗ್ಗೆ ನಾನು ಏಕೆ ಮಾತನಾಡಲಿ, ಕುಮಾರಸ್ವಾಮಿ ಚುನಾವಣೆ ನಿಂತಿದ್ದಾನೆ ಎಂದು ಆಶೀರ್ವಾದ ಮಾಡಿ, ಬಿಜೆಪಿಯವರು ತೆರಿಗೆ ಹಣ ದರೋಡೆ ಮಾಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು 40% ಸರ್ಕಾರ ಎನ್ನುತ್ತಾರೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಲು ಆಗಲ್ಲ. ಅವರ ನಡವಳಕೆಯನ್ನು ನಾನು ನೋಡಿದ್ದೇನೆ. ಇಬ್ಬರ ಜೊತೆಯಲ್ಲಿಯೂ ಸರ್ಕಾರ ಮಾಡಿದ್ದೆನೆ. ನನ್ನ ಯಾವುದೇ ಕಾರ್ಯಕ್ರಮ ವಿಫಲ ಆದರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಮಾತನಾಡುವಾಗ ಮಧ್ಯದಲ್ಲಿ ಬಂದು ಸಾಲ ಮನ್ನಾ ಬಗ್ಗೆ ಹೇಳಿದ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿ, ವ್ಯಕ್ತಿ ಕೊಟ್ಟ ವಿವರ ಓದಿದ ಕುಮಾರಸ್ವಾಮಿ ಅವರು, ಎರಡು ಕಡೆ ಸಾಲ ತೆಗೆದುಕೊಂಡಿದ್ದರೆ ಒಂದೆ ಕಡೆ ಸಾಲ ಮನ್ನಾ ಆಗುತ್ತದೆ ಎಂದು ವ್ಯಕ್ತಿಗೆ ಮನವರಿಕೆ ಮಾಡಿ ಕೊಟ್ಟರು. ನಂತರ ರೈತ ಸಂಘದ ಮುಖಂಡರು ಚುನಾವಣೆಗೆ ನಿಲ್ಲಬೇಕಾದರೆ ನಾನು ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.