ಹುಬ್ಬಳ್ಳಿ: ದೇಶದ ಜನತೆಗೆ ಪ್ರಧಾನಿ ಮೋದಿಯವರು ಉತ್ತಮ ಆಡಳಿತ ಬೇಕಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜೆಡಿಯು ಬಿಜೆಪಿಯನ್ನು ತೊರೆದಾಗ ಸೋತಿದ್ದರು. ಈಗ ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ರೀತಿ ತೊಂದರೆ ಯಾಗುವುದಿಲ್ಲ. ಪ್ರಧಾನಿ ಮೋದಿಯವರು ೨೦೧೪,೧೯ರಲ್ಲಿ ಹಾಗೂ ಇತ್ತೀಚೆಗೆ ಹಲವಾರು ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದೆ ಎಂದರು.
ತೆರಿಗೆದಾರರ ದುಡ್ಡು ಯಾವುದಕ್ಕೆ ಬಳಕೆಯಾಗಬೇಕು ಎಂಬ ದೆಹಲಿ ಮುಖ್ಯ ಮಂತ್ರಿ ಕೇಜ್ರಿವಾಲ್ ಮಾತಿಗೆ ಪ್ರತಿಕ್ರಿಯಿಸಿ, ಕೇಜ್ರಿವಾಲ್ ಅವರು ಬೇಜವಾಬ್ದಾರಿಯ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ದೆಹಲಿ ಅಷ್ಟೇ ಅಲ್ಲದೆ ದೇಶದ ಹಲವು ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅಲ್ಲಿ ಉತ್ತಮ ಶಿಕ್ಷಣವಿದಿದ್ದರೆ ಆಪ್ನ ಶಾಸಕರು ಯಾಕೇ ಅವರ ಮಕ್ಕಳನ್ನು ಅಲ್ಲಿಯ ಶಾಲೆಗಳಿಗೆ ಕಳುಹಿಸುವುದಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾವುದೇ ಚಿಂತನೆಯಿಲ್ಲ. ಇದು ಕೇವಲ ಊಹಾಪೋಹ ವಾಗಿದೆ. ಈಗಾಗಲೇ ಸಿಎಂ ಬದಲಾವಣೆ ಸುದ್ದಿ ಕುರಿತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನವೀನ ಕುಮಾರ ಕಟೀಲ್ ಸ್ಪಷ್ಟ ಪಡಿಸಿದ್ದಾರೆ. ರಾಜ್ಯದಲ್ಲಿ ಆಗಲಿ, ಕೇಂದ್ರದಲ್ಲಿ ಆಗಲಿ ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.