ಕುಂದಗೋಳ: ಮೂವತ್ತು ನಲವತ್ತು ವರ್ಷಗಳಿಂದ ತನ್ನವರು ಎನ್ನುವವರು ಇಲ್ಲದೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಬಂದು ವಾಸಿಸಲು ಸೂರಿಲ್ಲದೇ ಅವರಿವರ ಮನೆಯಲ್ಲಿ ವಾಸಿಸುತ್ತಾ ಬದುಕಿನ ದಾರಿ ಸವೆಸಿದ ಎರಡು ಹಿರಿಯ ಜೀವಗಳಿಗೆ ಕೊನೆಗೂ ಸೂರೊಂದು ಒದಗಿ ಬಂದಿದೆ.
ಕಳೆದ 30-40 ವರ್ಷಗಳ ಹಿಂದೆ ಗುಡೇನಕಟ್ಟಿಗೆ ಆಗಮಿಸಿದ ಬಸಮ್ಮ, ಮುಶೇಮ್ಮ ಎಂಬ ವೃದ್ಧೆಯರು ಇಳಿವಯಸ್ಸಿನಲ್ಲಿ ಅವರಿವರ ಮನೆಯಲ್ಲಿ ಆಶ್ರಯ ಪಡೆಯುತ್ತಾ ಜೀವನ ಕಳೆದು ಮುಪ್ಪಿನ ಅವಸ್ಥೆಗೆ ಸಿಲುಕಿದ್ದರು. ಸದ್ಯ ಇವರ ಕೊನೆಗಾಲದಲ್ಲಿ ಗ್ರಾಮದ ಜನರ ಸಹಕಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಾಯಕಲ್ಪದಿಂದ ಮನೆಯೊಂದು ನಿರ್ಮಾಣ ಆಗುತ್ತಿದ್ದು ಆ ಕಾರ್ಯಕ್ಕೆ ಭೂಮಿಪೂಜೆ ನಡೆದಿದೆ.
ಬಸಮ್ಮ ಮುಶೇಮ್ಮ ವೃದ್ಧೆಯರ ಆಶ್ರಯಕ್ಕಾಗಿ ಗುಡೇನಕಟ್ಟಿ ಗ್ರಾಮದ ಶಿವಾನಂದ ಕಳಸಣ್ಣನವರ ಎಂಬುವವರು ಜಾಗ ನೀಡಿದರೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಮನೆ ನಿರ್ಮಿಸುವ ಭರವಸೆ ನೀಡಿ ಭೂಮಿ ಪೂಜೆ ಕೈಗೊಂಡಿದೆ.
ಒಟ್ಟಾರೆ ನಾಲ್ಕು ದಶಕ ಅವರಿವರ ಮನೆಯಲ್ಲೇ ಕಾಲ ಕಳೆದ ವೃದ್ಧ ಜೀವಗಳಿಗೆ ಕೊನೆಗಾಲದಲ್ಲಿ ಮಂಜುನಾಥನ ಆಶೀರ್ವಾದದ ಫಲವಾಗಿ ಮನೆ ದೊರೆತಿದೆ.