ಧಾರವಾಡ: ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರ ಮಂತ್ರಾಲಯವು ನವದೆಹಲಿಯ ಹೆಬಿಟೇಟ್ ಸೆಂಟರ್ ದಲ್ಲಿರುವ ನ್ಯಾಷನಲ್ ಅರ್ಬನ್ ಕಾನ್ ಕ್ಲೇವ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಗರ ಕಲಿಕಾ ವೇದಿಕೆಯಲ್ಲಿನ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಲೋಕಲ್ ಸಲ್ಯೂಷನ್ ಇನ್ ರಿಜಿನಲ್ ಲ್ಯಾಂಗ್ವೇಜ್ ಪ್ರವರ್ಗದಲ್ಲಿ ದಿನದ 24 ಗಂಟೆ ನೀರು ಪೂರೈಸುವ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಅಳ್ನಾವರ ಪಟ್ಟಣ ಪಂಚಾಯತಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕುನಾಲ್ ಕುಮಾರ್, ಯುನಿಸೆಫ್ ಸೋಶಿಯಲ್ ಪಾಲಿಸಿ ಮುಖ್ಯಸ್ಥ ಹ್ಯೂನ್ ಹಿ ಬನ್, ಎನ್.ಡಿ.ಎಮ್.ಸಿ. ನಿರ್ದೇಶಕ ಮತ್ತು ಹಣಕಾಸು ಸಲಹೆಗಾರ ಪುಷ್ಕಲ್ ಉಪಾಧ್ಯಯ ಅವರು ಇಂದಿನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಳ್ನಾವರ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಅಳ್ನಾವರ ತಹಸಿಲ್ದಾರ ಬಸವರಾಜ್ ಬೆಣ್ಣಿಶಿರೂರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ್ ಬಿ.ಎಸ್. ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಾಶ್ ಮಗದುಮ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಅಳ್ನಾವರ ಪಟ್ಟಣ ಪಂಚಾಯಿತಿಯು ಈ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಏಕೈಕ ಪಟ್ಟಣ ಪಂಚಾಯಿತಿಯಾಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಧಾರವಾಡ ಜಿಲ್ಲೆಗೆ ಸಂದ ಗೌರವವಾಗಿದೆ.