ಹುಬ್ಬಳ್ಳಿ: ಗೋಕುಲ ರಸ್ತೆಯ ನೆಹರೂ ನಗರದಲ್ಲಿರುವ ಮಧು ಶಶಿಧರ ನಾಶಿಪುಡಿ ಅವರ ಮನೆಯಲ್ಲಿ 13.40 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ.
ಮನೆಯೊಂದರ ಹಿತ್ತಲ ಬಾಗಿಲ ಚಿಲಕ ಮುರಿದು ಒಳಕ್ಕೆ ನುಗ್ಗಿರುವ ಕಳ್ಳರು ಕೃತ್ಯ ನಡೆಸಿದ್ದಾರೆ. ಹೆಸ್ಕಾಂ ಉದ್ಯೋಗಿಯಾಗಿರುವ ಮಧು ಅವರ ಪತಿ ಬೆಂಗಳೂರಿನಲ್ಲಿದ್ದು, ಅವರು ಪುತ್ರನೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಪುತ್ರನನ್ನು ಶಾಲೆಗೆ ಕಳಿಸಿ, ಮಧು ಅವರು ಕಚೇರಿಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿರುವ ಕಳ್ಳರು, 320 ಗ್ರಾಂ ಚಿನ್ನಾಭರಣ ಹಾಗೂ 1,520 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಸಂಜೆ ಮಧು ಅವರು ಕಚೇರಿಯಿಂದ ಬಂದಾಗ ಕೃತ್ಯ ಗೊತ್ತಾಗಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ಹೇಳಿದರು.