ಧಾರವಾಡ : ಸಂವಿಧಾನ ಅಧ್ಯಯನ ಮಾಡಿದ ಸಿದ್ದರಾಮಯ್ಯರು, ಮಠಾಧೀಶರ ಬಗ್ಗೆ ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತೀರುಗೇಟು ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಕ್ಷೇತ್ರದ ಮುಖ್ಯಸ್ಥರಾದ ಮಠಾಧೀಶರದ್ದೂ ಒಂದು ಸಮವಸ್ತ್ರ ಇದೆ. ಅದು ಅವರ ಸಂಪ್ರದಾಯ ಹಾಗೂ ವಿಶೇಷತೆ ಸೂಚಿಸುತ್ತದೆ. ಆ ಪವಿತ್ರ ಸಂಪ್ರದಾಯವನ್ನು ಹಿಜಾಬ್ಗೆ ಹೋಲಿಕೆ ಸಲ್ಲ ಎಂದರು.
ಸಿದ್ದರಾಮಯ್ಯನವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಶಾಲೆಯಲ್ಲಿ ಬೇಧ, ಭಾವ ಇರಬಾರದು. ಎಲ್ಲರೂ ಒಂದೇ ಎಂಬ ಸಮನತೆ ಇರಲಿ ಎಂಬ ಕಾರಣಕ್ಕೆ ಸಮವಸ್ತ್ರ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಉದ್ದೇಶ ಅರಿಬೇಕು ಎಂದು ಸಲಹೆ ನೀಡಿದರು.
ರಾಜಕೀಯಕ್ಕೆ ಈ ರೀತಿ ಮಾತನಾಡಬಾರದು. ಹಿಜಾಬ್ ಬಗ್ಗೆ ಎಲ್ಲವೂ ಅಳೆದು ತೂಗಿ ನೋಡಿಯೇ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಅದನ್ನು ಗೌರವಿಸಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.