ಹುಬ್ಬಳ್ಳಿ: ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿ ಮುಜುಗರ ಮತ್ತು ಹಿನ್ನಡೆಯಾಗುವುದಿಲ್ಲ. ತನಿಖೆಯಿಂದ ಎಲ್ಲ ಸತ್ಯಾಂಶ ಹೊರಬರುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಕುರಿತು ತನಿಖೆ ನಡೆದಿದೆ. ತನಿಖೆಯಿಂದ ಎಲ್ಲ ಗೊತ್ತಾಗುತ್ತದೆ. ಸ್ವತಃ ಈಶ್ವರಪ್ಪ ನನ್ನೊಂದಿಗೆ ಮಾತನಾಡಿ ತನಿಖೆ ಆದಷ್ಟು ಬೇಗ ಮಾಡಲು ತಿಳಿಸಿದ್ದು, ಈ ಆರೋಪದಿಂದ ಮುಕ್ತನಾಗುತ್ತೇನೆ ಎಂದು ವಿಶ್ವಾಸವಿದೆ ಎಂದು ತಿಳಿಸಿದ್ದಾರೆ ಎಂದರು.
ತನಿಖೆ ಆರಂಭವಾಗಿದೆ. ಪೊಲೀಸರಿಗೆ ಕೆಲಸವನ್ನು ಮಾಡಲು ಬಿಡಬೇಕು. ಕಾಂಗ್ರೆಸ್ ನಾಯಕ ಜಾರ್ಜ್ ಅವರನ್ನು ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಬಂಧಿಸಿದ್ದರಾ? ಇಲ್ಲ. ಪೊಲೀಸರು ತನಿಖೆಗೆ ಏನು ಅವಶ್ಯಕತೆ ಇದೆ ಅದನ್ನು ಅವರೇ ತೀರ್ಮಾನ ಮಾಡುತ್ತಾರೆ. ಇವರೇ ತನಿಖೆ ಅಧಿಕಾರಿಗಳು, ನ್ಯಾಧೀಶರಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಈಶ್ವರಪ್ಪ ಅವರ ಬಂಧಿಸಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದರು.
ತನಿಖೆಯಿಂದ ಎಲ್ಲ ಗೊತ್ತಾಗಲಿದೆ. ಅವಾಗ ಸರ್ಕಾರಕ್ಕೆ ಹಿನ್ನಡೆಯೋ ಮುನ್ನಡೆಯೋ ತಿಳಿಯುತ್ತದೆ. ಯಾಕೆ ಕಾಂಗ್ರೆಸ್ ನಾಯಕರಿಗೆ ಆತಂಕ ಎಂದರು