ಬಾಗಲಕೋಟೆ: ಚಂದ್ರಮಾನ ಯುಗಾದಿ ಹಬ್ಬದ ನಿಮಿತ್ತ ಏಪ್ರಿಲ್ 3 ರಿಂದ ಏಪ್ರಿಲ್ 10 ರವರೆಗೆ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಗೆ ತೆರಳುವ ಭಕ್ತರಿಗೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ.
ಭಕ್ತರ ಅನುಕೂಲಕ್ಕೆ ಬಾಗಲಕೋಟೆ ಘಟಕದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯವೂ ಎರಡು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್ ಸೇರಿದಂತೆ ವಿವಿಧ ಭಾಗದಿಂದ ಭಕ್ತರು ಶ್ರೀಶೈಲಕ್ಕೆ ಹೋಗುತ್ತಾರೆ. ಸದ್ಯ ಬಾಗಲಕೋಟೆಯಿಂದ ಶ್ರೀಶೈಲಕ್ಕೆ 870 ರೂಪಾಯಿ ನಿಗದಿ ಮಾಡಲಾಗಿದೆ.
ಶ್ರೀಶೈಲಕ್ಕೆ ಅನೇಕ ಕಡೆಗಳಿಂದ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ – NWKRTC)ಗೆ ಸೇರಿರುವ ಚಿಕ್ಕೋಡಿ ವಿಭಾಗದಿಂದಲೂ ಬಸ್ ಸೇವೆ ಸಿಗಲಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಮತ್ತು ಗೋಕಾಕ್ ಬಸ್ ನಿಲ್ದಾಣಗಳಿಂದ ಶ್ರೀಶೈಲಕ್ಕೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ವಿಶೇಷವಾಗಿ ಒಂದು ಊರಿನಿಂದ 50 ಜನ ಪ್ರಯಾಣಿಕರು ಒಟ್ಟಾಗಿ ಬಂದರೆ, ಸಾಂದರ್ಭಿಕ ಒಪ್ಪಂದದ ಮೇರೆಗೆ ಶ್ರೀಶೈಲ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯಬಹುದು ಎಂದು ಎನ್ಡಬ್ಲ್ಯುಕೆಆರ್ಟಿಸಿ ತಿಳಿಸಿದೆ.