ಬಾಗಲಕೋಟೆ: ಸನಾದಿ ಅಪ್ಪಣ್ಣ ಶ್ರೇಷ್ಠ ಕಲಾವಿದ. ತಮ್ಮ ಜೀವನದಲ್ಲಿ ಕಲೆಯನ್ನೆ ಉಸಿರಾಗಿಸಿಕೊಂಡು ಬದುಕಿದರು. ಕಷ್ಟದ ಪರಿಸ್ಥಿತಿಯಲ್ಲಿಯೂ ಸನಾದಿ ಕಲೆ ಬಿಡಲಿಲ್ಲ. ಇಂತಹ ಬದ್ಧತೆ, ಪ್ರಮಾಣಿಕತೆ ಇದ್ದಾಗ ಮಾತ್ರ ಸಾಧನೆ ಸಾಧ್ಯವಾಯಿತು ಸಾಹಿತಿ, ಪತ್ರಕರ್ತ ವೀರೇಂದ್ರ ಶೀಲವಂತ ಹೇಳಿದರು.
ಜಿಲ್ಲೆಯ ಬೀಳಗಿ ಪಟ್ಟಣದ ಹಜರಾತ ಹಸನ್ ಡ್ರೋಂಗಿ ದಗರ್ಾ ಆವರಣದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸನಾದಿ ಅಪ್ಪಣ್ಣ ಕಲಾಕಾರರ ಸಂಘ ಆಶ್ರಯದಲ್ಲಿ ಹಮ್ಮಕೊಂಡಿದ್ದ ಸ್ವರ ಸಾಮ್ರಟ್ ಸನಾದಿ ಅಪ್ಪಣ್ಣನವರ 146ನೇ ಜಯಂತಿ, ಸಾಧಕರಿಗೆ ಸನ್ಮಾನ ಹಾಗೂ ಬೆಳ್ಳಿಹಬ್ಬದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಎಲ್ಲಿ ಅವಕಾಶ ಸಿಗುತ್ತದೆ. ಅಲ್ಲಿ ಸಮೃದ್ಧವಾದ ನಾಡು ಕಾಣಬಹುದು. ಸನಾದಿ ಅಪ್ಪಣ್ಣ ಕಲಾಕಾರರ ಸಂಘ ನಾಡಿನ ಕಲಾವಿದರಿಗೆ ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿದೆ. ಅಂತರ ರಾಷ್ಟ್ರೀಯಮಟ್ಟದಲ್ಲಿ ಬೀಳಗಿ ಹೆಸರು ಜನಮನದಲ್ಲಿ ಉಳಿಯುವಂತೆ ಮಾಡಿದೆ ಎಂದ ಅವರು, ಇಂದು ನಮ್ಮ ಮಕ್ಕಳಿಗೆ ಭವ್ಯ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ, ಕರ್ತವ್ಯದ ಪಾಠ ಮಾಡಬೇಕು. ಈ ನೆಲದ ಸಂಸ್ಕೃತಿಯಿಂದ ವಿಮುಖರಾಗದಂತೆ ಪಾಲಕರು, ಪೋಷಕರು ಜಾಗೃತಿ ವಹಿಸಬೇಕು ಎಂದು ಹೇಳಿದರು.
ಬೀಳಗಿ ಅನೇಕ ರತ್ನಗಳನ್ನು ನಾಡಿಗೆ ನೀಡಿದೆ. ನೇತ್ರ ತಜ್ಞ ಪದ್ಮಭೂಷಣ ಡಾ.ಎಂ.ಸಿ.ಮೋದಿ, ಖ್ಯಾತ ಕಾದಂಬರಿಕಾರರು ಕೃಷ್ಣಮೂರ್ತಿ ಪುರಾಣಿಕ, ಕರ್ನಾಟಕ ಶೇಕ್ಸಫೀಯರ ಕಂದಗಲ್ಲ ಹನುಮಂತರಾಯರು, ನಟವರ್ಯರಾದ ಮದ್ವಾಚಾರ್ಯ ಉಮರ್ಜಿ , ಅಭಿನೇತ್ರಿ ಅಮೀರಬಾಯಿ ಕರ್ನಾಟಕಿ, ಸಂಸ್ಕೃಂತ ಪಂಡಿತ ಪಂಡರಿನಾಥ ಗಲಗಲಿ, ಸಾಹಿತ್ಯ ವಿಮರ್ಶಕ ಸತ್ಯಕಾಮ, ಕವಿ ಮುದ್ದಣ್ಣ ಡಂಗಿ, ಸಿದ್ದಪ್ಪ ಬಿದರಿ, ಸನಾದಿ ಅಪ್ಪಣ್ಣ, ವೀರ ಸಿಂಧೂರ ಲಕ್ಷ್ಮಣ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರು ಇಲ್ಲಿನವರು ಎನ್ನುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಷ.ಬ್ರ.ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾರನಾಡಿ, ಮುಧೋಳದ ಘೋರ್ಪಡೆ ಮಹಾರಾಜರು ಮಹಾಲಿಂಗೇಶ್ವರ ಮಠದಲ್ಲಿ ಕಲಾ ಸ್ಪರ್ಧೆ ಏರ್ಪಡಿಸಿದ್ದರು. ಬೀಳಗಿಯ ಸನಾದಿ ಅಪ್ಪಣ್ಣ ಭಾಗವಹಿಸಿ ವಿಜೇತರಾಗಿದ್ದರು. ಆಗ ಮಹಾರಾಜರು ತಮಗೇನು ಬೇಕು ಎಂದು ಕೇಳಿದರು. ಅಪ್ಪಣ್ಣ ಅವರು ತಮಗಾಗಿ ಏನು ಕೇಳಲಿಲ್ಲ. ಮಹಲಿಂಗೇಶ್ವರ ರಥ ಆರಂಭವಾಗುವ ಮುನ್ನ ಬೀಳಗಿ ಹೆಸರಿನಲ್ಲಿ ತೆಂಗಿನ ಕಾಯಿ ಒಡೆಯಬೇಕು ಎಂದು ಕೇಳಿಕೊಂಡರು. ಇಂದಿಗೂ ಬೀಳಗಿ ಹೆಸರಿನಲ್ಲಿ ಕಾಯಿ ಒಡೆದ ಬಳಿಕ ರಥೋತ್ಸವ ಆರಂಭವಾಗುತ್ತದೆ. ಅಪ್ಪಣ್ಣ ಅವರು ಮಹಾರಾಷ್ಟ್ರದ ರಾಜಮನೆತನಗಳೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಡಿ.ಎಸ್. ಕಣವಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ದೊಡ್ಡಣ್ಣ ಭಜಂತ್ರಿ ಜಾನಪದ ಕವಿ ಸಿದ್ದಪ್ಪ ಬಿದರಿ, ವೇದಿಕೆ ಮೇಲೆ ತಾಲೂಕಾ ಜಾನಪದ ಕಲಾವಿದರ ಅಧ್ಯಕ್ಷ ಗಂಗಾಧರ ಪಾಟೀಲ, ಸನಾದಿ ಅಪ್ಪಣ್ಣ ಸಂಘದ ಕಾರ್ಯದರ್ಶಿ ಶೆಂಕ್ರಪ್ಪ ಸೋನ್ನ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು. ವಿಠ್ಠಲ ಪೂಜಾರ, ಸುಮಂತ ಗೌಡರ ನಿರೂಪಿಸಿದರು. ಬಸವರಾಜ ಬಜಂತ್ರಿ ವಂದಿಸಿದರು.