ಬಾಗಲಕೋಟೆ : ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಗಜಾನನ ಉತ್ಸವ ಸಮಿತಿಗಳ ಮಹಾಮಂಡಳದ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಹಾಮಂಡಳದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಭಾರತದಲ್ಲಿ ಗಣೇಶ ಉತ್ಸವಕ್ಕೆ ಭವ್ಯ ಪರಂಪರೆ, ಇತಿಹಾಸವಿದೆ. ಪ್ರತಿ ಗಲ್ಲಿಗಳಲ್ಲಿ ನೂರಾರು ವರ್ಷಗಳಿಂದ ಗಣೇಶ ಚತುರ್ಥಿ ದಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಹಿಂದು ಧರ್ಮದ ಅವಿಭಾಜ್ಯ ಅಂಗವಾಗಿದೆ. ಸಾಮಾಜಿಕ, ಧರ್ಮ, ದೇಶ ಭಕ್ತಿ ಜಾಗೃತಿ ಮೂಡಿಸುವುದು ಈ ಆಚರಣೆ ಹಿಂದಿರುವ ಉದ್ದೇಶ.ಸರ್ಕಾರ ಕೋವಿಡ್ ನೆಪದಲ್ಲಿ ಹಬ್ಬ ಆಚರಣೆಗೆ ಬ್ರೇಕ್ ಹಾಕುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ನಿಯಮವಾಳಿಗಳನ್ನು ಪಾಲನೆ ಮಾಡಿ ಸರಳವಾಗಿ ಗಣೇಶ ಉತ್ಸವ ಆಚರಣೆ ಮಾಡಲಾಗಿದೆ. ಈ ವರ್ಷವು ಆಚರಣಾ ಸಮಿತಿಗಳು ಎಲ್ಲ ಸಿದ್ಧತೆ ಕೈಗೊಂಡಿವೆ. ಮೂರ್ತಿ ತಯಾರಕರು 4-5 ತಿಂಗಳ ಹಿಂದೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಿರ್ಬಂಧ ವಿಧಿಸಬಾರದು. ಸಾರ್ವಜನಿಕರ ಗಣೇಶ ಪ್ರತಿಷ್ಠಾಪನೆಗೆ ಮಂಡಳಿ, ಸಮಿತಿಗಳಿಗೆ ಪರವಾನಿಗೆ ನೀಡಬೇಕು. ವಿಸರ್ಜನೆಗೆ ಒತ್ತಡ ಹಾಕಬಾರದು. ಶಾಮಿಯಾನ ಹಾಕಲು ಅನುಮತಿ ನೀಡಬೇಕು. ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಒಂದೇ ಸೂರಿನಡಿ ಪರವಾನಿಗೆ ಪತ್ರ ನೀಡಲು ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಶಿವು ಮೇಲ್ದಾಡ, ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಶಿವು ಮೇಲ್ನಾಡ, ಮನೋಜ ಕಡಿವಾಲ, ಆನಂದ ಬಾಂಡಗೆ, ಕುಮಾರಸ್ವಾಮಿ ಹಿರೇಮಠ. ತುಕಾರಾಮ ಹುಲ್ಲೂರ, ಸಂತೋಷ ಕಪಾಟೆ, ಕೃಷ್ಣ ರಾಜೂರ, ಅಶೋಕ ಮಹಿಂದ್ರಕರ, ದಶರಥ ಲೋನಾರಿ, ಮಲ್ಲು ಸಜ್ಜನ ಇತರರು ಇದ್ದರು.