ಬಾಗಲಕೋಟೆ: ಕೃಷಿಗೆ ಯೋಗ್ಯವಿರದ ಜಮೀನು ಸ್ವಾಧೀನಪಡಿಸಿಕೊಂಡು ರಾಜ್ಯದ ಪ್ರತಿ ಜಿಲ್ಲೆಯಲ್ಲಿ 500 ಎಕರೆ ಯಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗದ್ದನಕೇರಿ-ಕೆರೂರ ಮಾರ್ಗದಲ್ಲಿ ಕೃಷಿಗೆ ಯೋಗ್ಯವಿರದ ಜಮೀನು ಸ್ವಾಧೀನಪಡಿಸಿಕೊಂಡು ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು. ಅದಕ್ಕಾಗಿ ಸೂಕ್ತ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಲು ಯಶಸ್ವಿ ಉದ್ಯಮಿಗಳಿಗೆ ಅಗತ್ಯ ವಿರುವ ಎಲ್ಲ ಸೌಕರ್ಯ ದೊರಕಿಸಿ ಕೊಡಲು ಸಿಂಗಲ್ ವಿಂಡೋ ಸಿಸ್ಟಮ್ ವ್ಯವಸ್ಥೆ, ಉದ್ಯಮಿಗಳ ಸಮಸ್ಯೆ ನಿವಾರಣೆಗೆ ಕೈಗಾರಿಕಾ ಅದಾಲತ್, ಲ್ಯಾಂಡ್ ಬ್ಯಾಂಕ್ ನಿರ್ಮಿಸಲಾಗುವುದು. ಕೈಗಾರಿಕೆ ವಸಾಹತು ಪಕ್ಕದಲ್ಲೇ ಉದ್ಯಮಿಗಳ ವಸತಿಗೆ ನಗರಗಳನ್ನು ನಿರ್ಮಿಸಲಾಗುವುದು ಎಂದರು.
ರಾಜ್ಯದಲ್ಲಿ ಈ ಹಿಂದೆ ಎರಡು ಗ್ಲೋಬಲ್ ಮೀಟ್ಗಳನ್ನು ನಡೆಸಿ 15 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡಲಾಯಿತು. 2022ರಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಸಿ ವಿಶ್ವದ ಉದ್ಯಮಿಗಳನ್ನು ಆಕರ್ಷಿಲಾಗುವುದು ಎಂದು ನಿರಾಣಿ ತಿಳಿಸಿದರು.