ಬಾಗಲಕೋಟೆ :ಕಾಂಗ್ರೆಸ್ ಪಕ್ಷಕ್ಕೆ ಭವ್ಯವಾದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ, ನಂತರದಲ್ಲಿ ದೇಶದ ಒಳಿತಾಗಾಗಿ ಪಕ್ಷದ ನಾಯಕರು ತ್ಯಾಗ, ಬಲಿದಾನ ಮಾಡಿದ್ದಾರೆ. ದೇಶದ ಏಕತೆ, ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ ಎಂದು ವಿಧಾನ ಪರಿಷತ್ತ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇತಿಹಾಸ ರೋಮಾಂಚನಕಾರಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಗುಂಡಿಗೆ ಎದೆ ಒಡ್ಡಿ ನಿಂತಿತ್ತು. 6.5 ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಯುವ ಕಾರ್ಯಕರ್ತರು ಪಕ್ಷದ ಪ್ರಮುಖ ಹೆಜ್ಜೆ ಗುರುತು, ಹಿನ್ನಲೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯಗೊOಡಾಗ ದೇಶದಲ್ಲಿ ಸೈನ್ಯದ ಬಲ ಇರಲಿಲ್ಲ. ಶೇ.85 ಜನ ಅನಕ್ಷರಸ್ಥರಾಗಿದ್ದರು. ಕೋಟ್ಯಂತರ ಕುಟುಂಬಗಳಿಗೆ ಸೂರು, ಊಟ ಇರಲಿಲ್ಲ. ಎಲ್ಲವನ್ನು ಸವಾಲ್ ಆಗಿ ಸ್ವೀಕರಿಸಿದ ಪ್ರಥಮ ಪ್ರಧಾನಿ ದಿ.ಜವಾರಲಾಲ್ ನೆಹರು, ದಿ.ಲಾಲ್ ಬಹದ್ಧೂರ ಸರ್ದಾರ ವಲ್ಲಭಬಾಯಿ ಪಟೇಲ್ ಅನೇಕ ಸುಧಾರಣೆ ನೀತಿಗಳನ್ನು ಜಾರಿಗೆ ತಂದು ದೇಶವನ್ನು ಅತ್ಯುತ್ತಮವಾಗಿ ಕಟ್ಟಿದರು. ಅದರ ಪರಿಣಾಮ ವಿಶ್ವವೇ ಭಾರತವನ್ನು ತಿರುಗಿ ನೋಡುವಂತಾಯಿತು ಎಂದರು.
ಜನರಿಗೆ ಬಿಜೆಪಿ ನಾಯಕರು ಸುಳ್ಳುಗಳನ್ನು ಹೇಳಿ ಸರಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಸತ್ಯ ತಿಳಿಸಬೇಕು. ಮುಂಬರುವ ತಾ.ಪಂ, ಜಿ.ಪಂ, ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ತನ್ಮೂಲ ಬಿಜೆಪಿ ಧೂಳಿಪಟ ಮಾಡಬೇಕು ಎಂದ ಅವರು ಎಸ್.ಜಿ.ನಂಜಯ್ಯನಮಠ ಉತ್ತಮವಾಗಿ ಪಕ್ಷ ಸಂಘಟಿಸುತ್ತಿದ್ದಾರೆ. ಇದಕ್ಕೆ ಎಲ್ಲರು ಸಾಥ್ ನೀಡಬೇಕು ಎಂದು ಮನವಿ ನಾಡಿದರು.
ಮಾಜಿ ಶಾಸಕ ಜಿ.ಟಿ.ಪಾಟೀಲ, ಮಾತನಾಡಿ, ಪಕ್ಷ ಸಂಘಟನೆ, ಚುನಾವಣೆ ನಿಭಾಯಿಸುವುದು ಸುಲಭದ ಕೆಲಸವಲ್ಲ. ನಂಜಯ್ಯನಮಠ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಚೈತನ್ಯ ಬಂದಿದೆ. ಬಿಜೆಪಿ ರಾಜ್ಯ, ಕೇಂದ್ರದಲ್ಲಿ ಆಡಳಿತ ವೈಲ್ಯವಾಗಿದೆ. ಬೆಲೆ ಏರಿಕೆಗೆ ಜನ ಬೇಸತ್ತು ಹೋಗಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇದನೆಲ್ಲ ಜನರ ಮುಂದೆ ಇಡಬೇಕು. ಕಾಂಗ್ರೆಸ್ ಹಳೇ ಪದ್ಧತಿ ಬಿಟ್ಟು ಹೊಸ ಮಾದರಿಯ ಚುನಾವಣೆ ನೀತಿ ಬದಲಾಯಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಉಮಾಶ್ರೀ ಮಾತನಾಡಿ, ಧರ್ಮದ ಹೆಸರಿನಲ್ಲಿ ಅರ್ಧಮಿಯರು ಆಡಳಿತ ಮಾಡುತ್ತಿದ್ದಾರೆ. ಈ ಬಗ್ಗೆ ಜನರ ಮನವರಿಕೆ ಮಾಡಬೇಕಿದೆ. ತಳಮಟ್ಟದಲ್ಲಿ ಪಕ್ಷ ಸಂಘಟಿಸಿದಾಗ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ಎಲ್ಲರು ಶ್ರಮಿಸಬೇಕು ಎಂದರು.
ವಿಧಾನ ಪರಿಷತ್ತ ಸದಸ್ಯ ಆರ್.ಬಿ.ತಿಮ್ಮಾಪುರ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಂ.ಬಿ.ಸೌದಾಗರ, ಮುಖಂಡರಾದ ಸತೀಶ ಬಂಡಿವಡ್ಡರ, ಕಾಶಿನಾಥ ಹುಡೇದ, ನಂದು ಪಾಟೀಲ, ನಾಗರಾಜ ಹದ್ಲಿ, ಬಸವಪ್ರಭು ಸರನಾಡಗೌಡ, ರಾಜು ಮನ್ನಿಕೇರಿ, ನಿಂಗನಗೌಡ ಪಾಟೀಲ, ರವೀಂದ್ರ ಕಲಬುರ್ಗಿ, ಎನ್.ಬಿ.ಗಸ್ತಿ ಸೇರಿದಂತೆ ಇತರರು ಇದ್ದರು.