ಬೆಂಗಳೂರು: ಮುಂದಿನ ಎಂಟು ತಿಂಗಳಲ್ಲಿ ರಾಜ್ಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಬಗೆಯ ಔಷಧಿಗಳು ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯ ಎಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಡಿ.ಎಸ್. ಅರುಣ್ ಅವರು ಕೇಳಿದ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಿಗೆ 732 ಬಗೆಯ ಔಷಧಿಗಳನ್ನು ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಪೂರೈಕೆ ಮಾಡಬೇಕು. 410 ಔಷಧಗಳು ಅಗತ್ಯವಿದ್ದರೆ, ಉಳಿದವು ಅಪೇಕ್ಷಣಿಯ ಔಷಧಿಗಳಾಗಿವೆ ಎಂದರು.
ಈ ಪೈಕಿ 192 ಬಗೆಯ ಔಷಧಿಗಳು ಸ್ಟಾಕ್ ಇಲ್ಲ. ರಾಜ್ಯದ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಅಗತ್ಯ ಔಷಧಿಗಳು ಕೊರತೆ ಇದ್ದಲ್ಲಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅನುದಾದಡಿ ಲಭ್ಯವಿರುವ ಅನುದಾನ, ಎಬಿಎಆರ್ಕೆ ಅನುದಾನ, ಎಆರ್ಎಸ್ ಅನುದಾನ ಹಾಗೂ ಇತರ ಅನುದಾನಗಳಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುವಂತೆ ಸೂಚಿಸಲಾಗಿದೆ.
ಔಷಧಿಗಳ ಪೂರೈಕೆಗಾಗಿ ಯಾವುದೇ ರೀತಿಯಾಗಿ ಕೊರತೆಯಾಗದಂತೆ ಎರಡು ವರ್ಷಗಳ ವರೆಗೆ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ ರಾಜ್ಯಾದ್ಯಂತ ಔಷಧಗಳ ಸುಗಮ ಪೂರೈಕೆ ವ್ಯವಸ್ಥೆಯನ್ನು ಇನ್ನಷ್ಟು ಸದೃಢ ಮಾಡಲಾಗುವುದು. ಅದೇ ರೀತಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಹೇಗೆ ಮಾಡಬೇಕೆಂಬ ಬಗ್ಗೆ ಸಿ-ಡಾಕ್ ಕಂಪನಿಗೆ ವರದಿ ನೀಡುವಂತೆ ತಿಳಿಸಲಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳು ಎಷ್ಟಿವೆ, ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇಲ್ಲ ಎಂದು ತಿಳಿಸಿದರು.