ಹಿಂದೂ ಧರ್ಮೀಯರ ಪವಿತ್ರ ದೊಡ್ಡ ಹಬ್ಬ ಗೌರಿ-ಗಣೇಶ ಚತುರ್ಥಿಯನ್ನು ಇಂದು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ದಶಿ, ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲ್ಪಡುವ ಈ ಹಬ್ಬವು ದೇಶದ ಪ್ರಮುಖ ರಜಾದಿನಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಈ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸುತ್ತದೆ.
ಮುಂಜಾನೆಯೇ ಮನೆಯಲ್ಲಿ ಹೆಂಗಳೆಯರು ಮಕ್ಕಳು ಎದ್ದು ಮನೆ ಮುಂದೆ ಸಾರಿಸಿ ರಂಗೋಲಿ ಬಳಿದು ತೋರಣ ಕಟ್ಟಿ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ. ಬೆಳಗ್ಗೆಯೇ ಸ್ನಾನ ಮಾಡಿ ದೇವರ ಮನೆಯಲ್ಲಿ ಗಣೇಶ ಮೂರ್ತಿ ಇಟ್ಟು ಅಲಂಕಾರ ಮಾಡಿ, ನೈವೇದ್ಯ ಮಾಡಿ ಗೌರಿ-ಗಣೇಶ ಸ್ತೋತ್ರ, ದೇವರ ನಾಮ, ಅಷ್ಟೋತ್ತರಗಳನ್ನು ಮನೆಯವರೆಲ್ಲಾ ಸೇರಿ ಹೇಳಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದಾರೆ.
ಈ ವರ್ಷ, ಇದು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದೆ. ಕೆಲವೆಡೆ ಸೆಪ್ಟೆಂಬರ್ 18 ರಂದು ಕೂಡ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಗಣೇಶನ ಜನ್ಮವನ್ನು ಸುಂದರವಾಗಿ ಸ್ಮರಿಸುತ್ತದೆ ಮತ್ತು ಜನರು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಶುಭ ಫಲಕ್ಕಾಗಿ ಗಣೇಶನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.
ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು ಮರಾಠ ರಾಜ ಶಿವಾಜಿ ಮಹಾರಾಜರು ಜನಪ್ರಿಯಗೊಳಿಸಿದರು ಎನ್ನಲಾಗುತ್ತದೆ.
ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರಾದ ಆನೆಯ ತಲೆಯುಳ್ಳ ಗಣೇಶನ ಜನ್ಮವನ್ನು ಗುರುತಿಸಲು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಮತ್ತು ಅದೃಷ್ಟವನ್ನು ತರುತ್ತಾನೆ. ಈ ಹಬ್ಬವು ಹಿಂದೂಗಳು ಒಗ್ಗೂಡಲು ಹಾಗೂ ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಲು ಉತ್ತಮ ದಿನವಾಗಿದೆ.
ಅಕಾಲಿಕ ಮಳೆಯಿಂದ ಹಬ್ಬಕ್ಕೂ ಕೊಂಚ ಎಫೆಕ್ಟ್ ತಟ್ಟಿದ್ದು ಹೂ-ಹಣ್ಣುಗಳ ದರ ನಿಯಮಿತವಾಗಿ ಏರಿಕೆಯಾಗಿದೆ. ಹೂ-ಹಣ್ಣು, ಎಕ್ಕದ ಹೂ ಹಾರ, ಗರಿಕೆಗೆ ಭಾರೀ ಬೇಡಿಕೆಯಿದ್ದು, ಖರೀದಿಸಲು ಬಂದವರಿಗೆ ಹೂ-ಹಣ್ಣಿನ ಸ್ವಲ್ಪ ಮಟ್ಟಿನ ದರ ಹೆಚ್ಚಳದಿಂದ ಕೊಂಚ ಬೇಸರವಾದರೂ, ಹಬ್ಬಕ್ಕೆ ಭರ್ಜರಿಯಾಗೇ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.