ಚಾಮರಾಜನಗರ: ಹುಲಿ ಉಗುರು ಮಾರಾಟ ಮಾಡಲು ಪ್ರಯತ್ನಿಸುತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೊಳ್ಳೇಗಾಲ ದೊಡ್ಡ ನಾಯಕರ ಬೀದಿ ನಿವಾಸಿ ಆಟೋ ಚಾಲಕ ನಾರಾಯಣಿ(33) ಹಾಗೂ ಹೊಸ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಯೀಮ್ ಪಾಷಾ (34) ಎಂದು ಗುರುತಿಸಲಾಗಿದೆ.
ಅರಣ್ಯ ಸಂಚಾರಿ ದಳ ಪಿಎಸ್ಐ ಮುದ್ದು ಮಾದೇವ ತಂಡ ಬೇರೆ ಪ್ರಕರಣದ ಸಂಬಂಧ ಮಾಹಿತಿಗಾಗಿ ಪಟ್ಟಣದ ಅಣಗಳ್ಳಿ ರಸ್ತೆಯಲ್ಲಿ ಬುಧವಾರ ಸಂಜೆ ತೆರಳುತಿದ್ದಾಗ ಜೀಪ್ ಎದುರು ಬಂದ ಆಟೋ ರಿಕ್ಷಾವನ್ನು ಗಮನಿಸಿದ್ದಾರೆ. ಪೊಲೀಸರನ್ನು ನೋಡಿದ ಆಟೋದಲ್ಲಿದ್ದ ಇಬ್ಬರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಿಲ್ಲ. ನಂತರ ಇಬ್ಬರನ್ನೂ ಪರಿಶೀಲಿಸಿದಾಗ ಆರೋಪಿ ನಯೀಮ್ ಪಾಷಾನ ಹತ್ತಿರ ಎರಡು ಹುಲಿ ಉಗುರುಗಳು ದೊರಕಿವೆ. ಈ ಉಗುರುಗಳು ನನ್ನದಲ್ಲ, 3 ತಿಂಗಳಿನ ಹಿಂದೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯಿಂದ ಡಾಲರ್ ಮಾಡಿಸಿಕೊಳ್ಳಲು ಹುಲಿ ಉಗುರು ಖರೀದಿ ಮಾಡಿದ್ದೆ ಎಂದು ಆರೋಪಿ ತಿಳಿಸಿದ್ದು , ಹೆಚ್ಚಿನ ಹಣಕ್ಕೆ ಅಣಗಳ್ಳಿ ಬಳಿ ಮಾರಾಟಕ್ಕೆ ಬಂದಿದ್ದೆ ಎಂದು ನಾರಾಯಣಿ ಒಪ್ಪಿಕೊಂಡಿದ್ದಾನೆ.
ಬಂಧಿತರಿಂದ 1 ಆಟೋ, 2 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.