ಮದ್ದೂರು: ಸಾಲ ಬಾಧೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶತಕ ದಾಟಿದ್ದು, ಮದ್ದೂರು ತಾಲೂಕಿನಲ್ಲಿ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲೂಕಿನ ವಳೆಗೆರೆಹಳ್ಳಿ ಗ್ರಾಮದ ನಾಥಪ್ಪ ಉ. ಚಿಕ್ಕಮುತ್ತೇಗೌಡ (50) ಹಾಗೂ ಸಾದೊಳಲು ಗ್ರಾಮದ ಶಿವಲಿಂಗಯ್ಯ (55) ಆತ್ಮಹತ್ಯೆ ಮಾಡಿಕೊಂಡ ರೈತರು. ವಳಗೆರೆಹಳ್ಳಿ ಗ್ರಾಮದ ನಾಥಪ್ಪ ಅವರಿಗೆ 1.16 ಎಕರೆ ಜಮೀನಿದ್ದು, ರೇಷ್ಮೆ, ಭತ್ತ, ಕಬ್ಬು ಬೆಳೆಯಲು ಪಿಎಲ್ಡಿ ಬ್ಯಾಂಕ್ನಿಂದ 1.25 ಲಕ್ಷ ರೂ., ವಿಎಸ್ಎಸ್ಎನ್ಬಿ ಸೊಸೈಟಿಯಲ್ಲಿ ಬೆಳೆ ಸಾಲವಾಗಿ 25,000, ಖಾಸಗಿಯಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು.
ಸಾಲಗಾರರ ಒತ್ತಡ ಹೆಚ್ಚಾಗಿ ಮನನೊಂದು ಶನಿವಾರ ಬೆಳಗಿನ ಜಾವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ ಸರಸ್ವತಿ, ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿದ್ದಾಳೆ. ಸಾದೊಳಲು ಗ್ರಾಮದ ರೈತ ಶಿವಲಿಂಗಯ್ಯ ಅವರಿಗೆ 35 ಗುಂಟೆ ಜಮೀನಿದ್ದು, ಇದರಲ್ಲಿ ಕಬ್ಬು ಬೆಳೆ ಬೆಳೆದು, ಕಟಾವು ಮಾಡಿದ್ದರು. ಸಕಾಲಕ್ಕೆ ಕಾರ್ಖಾನೆಯು ಹಣ ನೀಡಿರಲಿಲ್ಲ ಎನ್ನಲಾಗಿದೆ.
ಮೃತ ಶಿವಲಿಂಗಯ್ಯ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮಗಳ ಮದುವೆಗಾಗಿ 4 ಲಕ್ಷ ರೂ. ಹಾಗೂ ಕೃಷಿಗಾಗಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ ಸಾಲ ಮಾಡಿದ್ದರು. ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶನಿವಾರ ಬೆಳಗಿನ ಜಾವ ತನ್ನ ಜಮೀನಿನ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.