ಮೂಡಿಗೆರೆ: ಮಕ್ಕಳಿಗೆ ವಿದ್ಯೆ ಕೊಡುವ ಯಾವುದೇ ಸಂಸ್ಥೆಯಾದರೂ ಅದು ನಿಜವಾದ ದೇವಾಲಯವಾಗಿರುತ್ತದೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಒಕ್ಕಲಿಗರ ಸಂಘದ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಜಗತ್ತಿನ ಯಾವುದೇ ದೇಶದಲ್ಲಿ ಭಾರತದಲ್ಲಿರುವ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ವಿದ್ಯೆಯನ್ನು ಕಲಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲ ವಿಶ್ವ ವಿದ್ಯಾಲಯವಾದ ನಳಂದ ತಕ್ಷಶಿಲಾದಂತಹ ವಿದ್ಯಾ ಸಂಸ್ಥೆಗೆ ವಿದೇಶದಿಂದ ನಾಮುಂದು, ತಾಮುಂದು ಎಂದು ಭಾರತಕ್ಕೆ ಬಂದು ಸೇರ್ಪಡೆಗೊಳ್ಳುತ್ತಿದ್ದರು. ಪ್ರಕೃತಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಗಾಳಿ, ನೀರು, ಬೆಳಕು ಒದಗಿಸುವಂತೆ, ಮಾನವ ಜೀವನದುದ್ದಕ್ಕೂ ಫಲಾಪೇಕ್ಷೆಯಿಲ್ಲದೆ ಬದುಕುವಂತಾಗಬೇಕು. ಪ್ರಪಂಚಕ್ಕೆ ಸೊನ್ನೆಯ ಮುಖಾಂತರ ಲೆಕ್ಕವನ್ನು ಕಲಿಸಿಕೊಟ್ಟಿರುವುದು ಭಾರತೀಯ ಗಣಿತಜ್ಞರೆಂದು ಇಂದಿನ ಮಕ್ಕಳಿಗೆ ತಿಳಿಸುವಂತಹ ಕೆಲಸ ಶಿಕ್ಷಣದಿಂದಾಗಬೇಕು ಎಂದು ತಿಳಿಸಿದರು.
ಯಾವುದೇ ಶಿಕ್ಷಣ ಸಂಸ್ಥೆ ಜಾತಿ, ಧರ್ಮದ ಆಧಾರದ ಮೇಲೆ ನಿಲ್ಲದೇ ಸಾಮರಸ್ಯ ಭಕ್ತಿಪೂರ್ವಕವಾದ ಶಿಕ್ಷಣ ನೀಡುವಂತಾಗಬೇಕು. ಸಂಸ್ಥೆ ಉತ್ತಮವಾಗಿ ಬೆಳೆಯಬೇಕಾದರೆ ಅಲ್ಲಿನ ಶಿಕ್ಷಕರು ಮೊದಲು ಉತ್ತಮರಾಗಿರಬೇಕು. ಆಗ ಜ್ಞಾನದ ಜತೆಗೆ ಜ್ಞಾನಜ್ಯೋತಿ ಪ್ರಚಲಿಸುತ್ತದೆ. ಅಲ್ಲದೆ ಆಧುನಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕ ವಿದ್ಯೆ ಕೊಟ್ಟಾಗ ಕೂಡ ಜ್ಞಾನದ ವಿದ್ಯೆ ಲಭಿಸುತ್ತದೆ ಎಂದು ತಿಳಿಸಿದರು.
ಮಾಜಿ ಸಂಸದ ಹಾಗೂ ವಿಎಸ್ ಸಂಸ್ಥೆ ಅಧ್ಯಕ್ಷ ಡಿ.ಎಂ.ಪುಟ್ಟೇಗೌಡ ಮಾತನಾಡಿ, ಕಳೆದ 22 ವರ್ಷದಿಂದ ವಿಎಸ್ ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆದುಕೊಂಡು ಬರಲಾಗಿದೆ. ಸಂಸ್ಥೆಯಲ್ಲಿ ಆಟ, ಪಾಠದೊಂದಿಗೆ ಸಾಂಸ್ಕೃತಿಕ, ಕಲೆ ಕ್ಷೇತ್ರದಲ್ಲಿ ಹೆಸರು ಗಳಿಸಿರುವುದಲ್ಲದೇ ಉತ್ತಮ ಪಲಿತಾಂಶ ನೀಡುತ್ತಾ ಮುನ್ನೆಡೆದುಕೊಂಡು ಬಂದಿದೆ. ವಿಜ್ಞಾನ ವಿಭಾಗದ ಕಾಲೇಜು ತೆರೆದಿದ್ದು, ಕಾಲೇಜು ಕ್ಷೇತ್ರದಲ್ಲೂ ಉತ್ತಮ ಪಲಿತಾಂಶದ ಸಾಧನೆ ಮಾಡಿದೆ. ಮುಂದಿನ ದಿನದಲ್ಲಿ ಇನ್ನು ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಆದಿಚುಂಚನಗಿರಿ ಗುರುಪೀಠಕ್ಕೆ ವಹಿಸಿದ್ದೇವೆ ಎಂದು ಹೇಳಿದರು.