ಪುತ್ತೂರು: ಕಾಲೇಜು ಸಮವಸ್ತ್ರ ಧರಿಸಿರುವ ಓರ್ವ ವಿದ್ಯಾರ್ಥಿನಿ, ವಿದ್ಯಾರ್ಥಿಗಳು ಕಾರೊಂದರಲ್ಲಿ ಸರಸ ಮಾಡುತ್ತಿರುವ ದೃಶ್ಯಾವಳಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆಯ ಕುರಿತು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದು, ವಿದ್ಯಾರ್ಥಿನಿ ನೀಡಿದ ದೂರಿನಂತೆ ಅತ್ಯಾಚಾರ ಪ್ರಕರಣ ಮತ್ತು ಐಟಿ ಆ್ಯಕ್ಟ್ ಹಾಗೂ ದಲಿತ ದೌರ್ಜನ್ಯ ಕೇಸು ದಾಖಲಿಸಿಕೊಂಡಿದ್ದಲ್ಲದೆ ಪ್ರಕರಣ ಆರೋಪಿತ ಐವರು ವಿದ್ಯಾರ್ಥಿಗಳನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿಚಾರದಲ್ಲಿ ಬಜತ್ತೂರು ಗ್ರಾಮದ ಗಾಣದಮೂಲೆ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್ (19ವ), ಪೆರ್ನೆ ರಾಜಶ್ರೀ ಕೃಪದ ನಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್ (19ವ), ಪೆರ್ನೆ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್ (19ವ), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡರ ಪುತ್ರ ಸುನಿಲ್ (19ವ), ಬಂಟ್ವಾಳ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್ (19ವ) ಬಂಧಿತ ಆರೋಪಿಗಳು.
ಇವರನ್ನು ಪೆರ್ನೆ ಸಮೀಪ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿಗಳಾಗಿದ್ದು, ಫೆಬ್ರವರಿ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಎಂಬಲ್ಲಿಗೆ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಕೃತ್ಯಕ್ಕೆ ಬಳಸಿದ ಆರೋಪಿಗಳ ಪೈಕಿ ಗುರುನಂದನ್ ಅವರ ಇಕೋ ಸ್ಪೋರ್ಟ್ಸ್ ಕಾರನ್ನು ಇನ್ನಷ್ಟೆ ಪೊಲೀಸರು ವಶಕ್ಕೆ ಪಡೆಯಬೇಕಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿಯ ಡಿಎನ್ಎ ಪರೀಕ್ಷೆಗಾಗಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜು.4ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
ಸುಮೋಟೊ, ಅತ್ಯಾಚಾರ, ದಲಿತ ದೌರ್ಜನ್ಯ ಪ್ರಕರಣ ದಾಖಲು: ಒರ್ವ ಯುವತಿ ಮತ್ತು ಮೂವರು ಯುವಕರು ಸಾಮೂಹಿಕವಾಗಿ ಈ ಕೃತ್ಯದಲ್ಲಿ ತೊಡಗಿರುವ ವೀಡಿಯೊ ಜು.3ರಂದು ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗುತ್ತಿತ್ತಲ್ಲದೆ ಟಿವಿ ಮಾಧ್ಯಮದಲ್ಲೂ ಇದಕ್ಕೆ ಸಂಬಂಧಿಸಿ ವರದಿ ಬಂದಿತ್ತು. ಇದನ್ನು ಗಂಭೀರವಾಗ ಪರಿಗಣಿಸಿದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ಆರಂಭದಲ್ಲಿ ತಕ್ಷಣ ಸುಮೋಟು ಕೇಸು ದಾಖಲಿಸಿಕೊಂಡಿದ್ದರು.
ಬಳಿಕ ಕೃತ್ಯಕ್ಕೆ ಸಂಬಂಧಿಸಿ ವಿದ್ಯಾರ್ಥಿನಿ ಮತ್ತು ಅವರ ತಾಯಿಯನ್ನು ಎಸ್ಪಿಯವರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಘಟನೆಯ ಪೂರ್ಣ ಮಾಹಿತಿ ಪಡೆದು ಕೊಂಡ ಎಸ್ಪಿಯವರು ಕೇಸು ದಾಖಲಿಸಿಕೊಂಡಿದ್ದರು. ಯುವತಿ ನೀಡಿದ ಅತ್ಯಾಚಾರ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 341, 376, (ಡಿ) ಆರ್/ಡಬ್ಲ್ಯೂ 34 ಐಪಿಸಿ ಮತ್ತು 3(1)ಡಬ್ಲ್ಯೂ (1)(11), 3(2)ವಿ ಎಸ್ಸಿ/ಎಸ್ಟಿ ಪಿ.ಎ ದಲಿತ ದೌರ್ಜನ್ಯ ಕಾಯ್ದೆ 2015ರಂತೆ ಆರ್.ಡಬ್ಲ್ಯೂ 66 ಇ, 67 ಎ, ಐಟಿ ಆ್ಯಕ್ಟ್ ನಂತೆ ಪ್ರಕರಣ ದಾಖಲು ಮಾಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ನಡೆದ ಘಟನೆ: ಅತ್ಯಾಚಾರ ಘಟನೆ ಫೆಬ್ರವರಿ ತಿಂಗಳಲ್ಲಿ ನಡೆದಿದೆ ಎಂದು ವಿದ್ಯಾರ್ಥಿನಿಯು ವಿಚಾರಣೆ ವೇಳೆ ತಿಳಿಸಿದ್ದು, ಕಾಲೇಜು ಮುಗಿಸಿ ಸಂಜೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇದ್ದ ವೇಳೆ ಕಾರಿನಲ್ಲಿ ಬಂದ ಅರೋಪಿತ ವಿದ್ಯಾರ್ಥಿಗಳು ಸ್ವಲ್ಪ ಮಾತನಾಡಲು ಇದೆ ಎಂದು ಆಕೆಯನ್ನು ಮುಖ್ಯರಸ್ತೆಯಿಂದ ಕರೆದು ಹೋಗಿ ಒಳ ರಸ್ತೆಗೆ ಹೋಗುತ್ತಿದ್ದಂತೆ ವಿದ್ಯಾರ್ಥಿನಿ ಈ ರಸ್ತೆಯಲ್ಲಿ ಯಾಕೆ ಕರೆದು ಕೊಂಡು ಬಂದಿದ್ದೀರಿ ಎಂದು ವಿಚಾರಿಸಿದ್ದಾರೆ. ಇದೇ ವೇಳೆ ಕಾರನ್ನು ನಿಲ್ಲಿಸಿದ ವಿದ್ಯಾರ್ಥಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಈ ಸಂದರ್ಭ ವಿದ್ಯಾರ್ಥಿನಿಗೆ ಅಮಲು ಪದಾರ್ಥ ನೀಡಿಲ್ಲ ಎಂದು ವಿದ್ಯಾರ್ಥಿನಿ ವಿಚಾರಣೆ ವೇಳೆ ಮಾಹಿತಿ ನೀಡಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಭಯದಿಂದ ದೂರ ನೀಡಿಲ್ಲ: ದೂರು ಕೊಟ್ಟರೆ ನಿನ್ನದೆ ಮರ್ಯಾದೆ ಹೋಗುತ್ತದೆ ಎಂದು ಆರೋಪಿತ ವಿದ್ಯಾರ್ಥಿಗಳು ಬೆದರಿಸಿದ್ದರು. ಜೊತೆಗೆ ಮನೆಯಲ್ಲಿ ಗೊತ್ತಾದರೆ ತೊಂದರೆ ಆಗುತ್ತದೆ ಎಂದು ನಾನು ಭಯ ಪಟ್ಟು ಕೊಂಡಿದ್ದೆ. ಹಾಗಾಗಿ ತಿಳಿಸಿಲ್ಲ. ವಿಡಿಯೋ ವೈರಲ್ ಆದಾಗ ವಿಚಾರ ಬೆಳಕಿಗೆ ಬಂದಿದೆ ಎಂದು ವಿದ್ಯಾರ್ಥಿನಿ ಮಾಹಿತಿ ನೀಡಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಅಶ್ಲೀಲ ವಿಡಿಯೋ ರವಾನಿಸಿದರೆ ಕ್ರಮ – ಎಸ್ಪಿ
ಸಾಮಾಜಿ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಅಥವಾ ಫೇಸ್ ಬುಕ್ನಲ್ಲ ಅಪ್ಲೊಡ್ ಹಾಗೂ ತಮ್ಮ ತಮ್ಮ ಮೊಬೈಲ್ ಪೋನ್ ಮೆಮೊರಿ, ಕಂಪ್ಯೂಟರ್ನಲ್ಲಿ ಇಟ್ಟಿರುವುದು ಕೂಡಾ ಅಪರಾಧ. ಇನ್ಫಾರ್ಮೇಶನ್ ಟೆಕ್ನಾಲೋಜಿ ಆ್ಯಕ್ಟ್ 66 ಎ ಪ್ರಕಾರ ಕಾಣಿಸದೆ ಇರುವ ಅಂಗಾಗಳನ್ನು ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸುವುದು ಅಪರಾಧ. ಈ ಕುರಿತು ರವಾನಿಸುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆಯೂ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಕಡಿಮೆ ಇದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ವಿನಂತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಎಬಿವಿಪಿ ಮನವಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪುತ್ತೂರಿನ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಇದೇ ಪ್ರಕರಣವನ್ನು ಮುಂದಿಟ್ಟು ಕೆಲವು ಕಿಡಿಗೇಡಿಗಳು ಆರೋಪಿಗಳು ಎಬಿವಿಪಿ ಕಾರ್ಯಕರ್ತರು ಎಂಬ ಅಪಪ್ರಚಾರವನ್ನು ಮಾಡುತ್ತಿರುವುದು ಕಂಡು ಬಂದಿದೆ. ಆದರೆ ಈ ಆರೋಪಿಗಳಿಗೂ ಎಬಿವಿಪಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಸಂಘಟನೆಯ ಸದಸ್ಯರು ಆಗಿರುವುದಿಲ್ಲ. ಹೀಗಿದ್ದರೂ ಆರೋಪಿಗಳ ಜತೆಗೆ ಸಂಘಟನೆಯ ಹೆಸರನ್ನು ಸೇರಿಸಿ ಅಪಪ್ರಚಾರ ನಡೆಸುವುದರಿಂದ ಸಂಘಟನೆಯ ಘನತೆಗೆ ಧಕ್ಕೆ ಬಂದಿದೆ.
ಇಲಾಖೆ ಕೂಡಲೆ ಆರೋಪಿಗಳನ್ನು ಪತ್ತೆ ಹಚ್ಚಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಿಯ ಬಿಡುವ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಮತ್ತು ಆ ಜಾಲತಾಣದ ಖಾತೆಗಳನ್ನು ತಕ್ಷಣ ನಿಲ್ಲಿಸಬೇಕೆಂದು ಎಬಿವಿಪಿ ನಗರ ಕಾರ್ಯದರ್ಶಿ ಶಿವಪ್ರಸಾದ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.