ಹಾಸನ: ಹಾಸನ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗುತ್ತಿದೆ ಅರಕಲಗೂಡು ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಚುರುಕುಗೊಂಡಿದೆ.
ಜೂನ್ ಜುಲೈನಲ್ಲಿ ಮಳೆ ಸುರಿಯಬೇಕಿತ್ತು ಆದರೆ ಕಡಿಮೆ ಪ್ರಮಾಣದ ಮಳೆಯಾಗಿದ್ದರಿಂದ ರೈತರು ಮಳೆ ಬರುವ ಹಾದಿಯನ್ನು ಕಾಯುತ್ತಿದ್ದರು. ಇದೀಗ ಆಗಸ್ಟ್ ಮೊದಲ ದಿನದಿಂದಲೇ ಉತ್ತಮ ಮಳೆಯಾಗುತ್ತಿದ್ದು, ಮಳೆ ಹೆಚ್ಚಾದರೆ ರೈತರು ಬೆಳೆಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಮಳೆಯ ಕಾರಣ ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಅನಾಹುತಗಳಾಗುವ ಸಂಭವ ಹೆಚ್ಚಿದೆ.
ಇನ್ನು ರಾಮನಾಥಪುರ ವ್ಯಾಪ್ತಿಯ ಕಾವೇರಿ ನದಿ ದಡದ ಜನರಲ್ಲಿ ಆತಂಕವುಂಟಾಗಿದ್ದು, ಕೊಡಗಿನಲ್ಲಿ ಮಳೆ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅದರ ಪರಿಣಾಮ ಹಾಸನ ಜಿಲ್ಲೆಯ ಹಲವು ಗ್ರಾಮಗಳಿಗೆ ಆಗಲಿದೆ. ಕಳೆದ ವರ್ಷ ಪ್ರವಾಹಕ್ಕೆ ರಾಮನಾಥಪುರ ಮತ್ತು ಕೊಣನೂರು ಅಕ್ಕಪಕ್ಕ ಹಳ್ಳಿಗಳಲ್ಲಿ ಅತಿವೃಷ್ಠಿಯಿಂದ ಭಾರೀ ನಷ್ಟ ಅನುಭವಿಸಿದ್ದರಲ್ಲದೆ, ತೊಂದರೆ ಅನುಭವಿಸಿದ್ದರು. ಇದೀಗ ಅದೇ ಭಯ ಇಲ್ಲಿನ ಜನರನ್ನು ಕಾಡತೊಡಗಿದೆ.