ಯಲ್ಲಾಪುರ: ರಾಸಾಯನಿಕವನ್ನು ಸಾಗಿಸುತ್ತಿದ್ದ ಟ್ಯಾಂಕರ್ ವಾಹನವು ರಾಷ್ಟ್ರೀಯ ಹೆದ್ದಾರಿ 63 ಅರ್ತಿಬೈಲ್ ಘಟ್ಟದಲ್ಲಿ ಉರುಳಿ ಬಿದ್ದು ರಾಸಾಯನಿಕ ಸೋರಿಕೆಯಿಂದಾಗಿ ಹಲವಾರು ತೋಟ ಹಾಗೂ ಗದ್ದೆಗಳಿಗೆ ಹಾನಿ ಸಂಭವಿಸಿದೆ.
ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಘಟನೆ ಸಂಬಂಧಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಮ್.ಆರ್.ಪಿ.ಎಲ್ ಕಂಪನಿಯ ಅಧಿಕಾರಿಗಳೊಂದಿಗೆ ಘಟನೆಗೆ ಸಂಬಂಧಿಸಿದಂತೆ ದೂರವಾಣಿ ಮೂಲಕವಾಗಿ ಚರ್ಚಿಸಲಾಗಿದೆ ಹಾಗೂ ಕಾರವಾರ ಮತ್ತು ಮಂಗಳೂರಿನಿಂದ ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ರಾಸಾಯನಿಕವು ಹಳ್ಳದ ನೀರಿನಲ್ಲಿ ಮಿಶ್ರಣವಾಗಿರುವ ಹಿನ್ನೆಲೆಯಲ್ಲಿ ನೀರನ್ನು ಪರಿಶೀಲನೆ ನಡೆಸಲಾಗುವುದು ಹಾಗೂ ಅವಘಡದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿ ಶೀಘ್ರವಾಗಿ ಪರಿಹಾರವನ್ನು ಒದಗಿಸುವಂತೆ ತಹಶೀಲ್ದಾರ್ ಅವರಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಡಿ.ವೈ.ಎಸ್.ಪಿ ಶ್ರೀ ರವಿ ನಾಯ್ಕ, ಸಿ.ಪಿ.ಆಯ್ ಸುರೇಶ್ ಯಳ್ಳೂರ್, ಹಾಗೂ ಕಂದಾಯ, ಅಗ್ನಿಶಾಮಕ ದಳದ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.