ಮಂಡ್ಯ: ಚುನಾವಣೆಗಳಲ್ಲಿ ಇವಿಎಂ ಮತ ಯಂತ್ರಗಳ ಬದಲಿಗೆ ಮತಪತ್ರ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪತ್ರ ಚಳವಳಿ ನಡೆಸಿದರು.
ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇವಿಎಂಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನೂರಾರುಪತ್ರಗಳನ್ನು ಬರೆದು ರಾಷ್ಟ್ರಪತಿಗಳಿಗೆ ಪೋಸ್ಟ್ ಮಾಡಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕಾ, ಜರ್ಮನಿ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂದಿಗೂ ಚುನಾವಣೆಗಳಿಗೆ ಮತಪತ್ರಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇವಿಎಂ ಮತಯಂತ್ರಗಳ ಬಗ್ಗೆ ಸಾಕಷ್ಟು ಅನುಮಾನ, ಅಪಸ್ವರಗಳು ಕೇಳಿಬರುತ್ತಿವೆ. ರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಇವಿಎಂ ಬಳಕೆಯನ್ನು ವಿರೋಧಿಸಿವೆ. ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿರುವುದರಿಂದ ರಾಷ್ಟ್ರಪತಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.
ಇವಿಎಂ ಬಳಕೆ ಕುರಿತಂತೆ ಕೇಂದ್ರ ಸರ್ಕಾರ ಹಠಮಾರಿ ಧೋರಣೆಯನ್ನು ಮುಂದುವರಿಸಿದೆ. ಮಾನವ ನಿರ್ಮಿತ ತಾಂತ್ರಿಕತೆ ಎಷ್ಟೇ ಮುಂದುವರೆದಿದ್ದರೂ ಅದರಿಂದ ಎಷ್ಟು ಅನುಕೂಲವೋ ಅಷ್ಟೇ ದುರುಪಯೋಗವಾಗುವ ಸಾಧ್ಯತೆಗಳಿವೆ. ರಾಷ್ಟ್ರದ ರಾಜಕೀಯ ಪಕ್ಷಗಳ ನಾಯಕರಲ್ಲಿ ಹಾಗೂ ದೇಶದ ನಾಗರೀಕರಲ್ಲಿ ಅನುಮಾನಕ್ಕೆ ಅವಕಾಶ ನೀಡಿರುವ ಇವಿಎಂ ರದ್ಧುಪಡಿಸಬೇಕೆಂದು ಪ್ರತಿಭಟನಾಕಾರರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.