ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಅಸಿಂಧುಗೊಳಿಸಿದ್ದಾರೆ.
ಚುನಾವಣೆಗೆ ಮುನ್ನವೇ ನಾಮಪತ್ರ ತಿರಸ್ಕೃತಗೊಂಡ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಹಿನ್ನಡೆಯಾದಂತಿದೆ.
ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಮಂಜುನಾಥ್ ಜಾತಿ ಪ್ರಮಾಣ ಪತ್ರ ನಕಲಿ ಎಂದಿದ್ದ ನ್ಯಾಯಾಲಯ, ಅವರ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಜೊತೆಗೆ ಶಾಸಕತ್ವವನ್ನೂ ಅಸಿಂಧುಗೊಳಿಸಿತ್ತು.
ಹೀಗಾಗಿ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ನಂತರ ಅವರ ನಾಮಪತ್ರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗ ಗುರುವಾರಕ್ಕೆ ಮುಂದೂಡಿತ್ತು. ಇಂದು ನ್ಯಾಯಾಲಯದ ಆದೇಶ ಸಿಕ್ಕ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮಂಜುನಾಥ್ ಅವರ ನಾಮಪತ್ರವನ್ನು ತಿರಸ್ಕರಿಸಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ತಾವು ಬುಡಗ ಜಂಗಮ (ಎಸ್ಸಿ) ಜಾತಿಗೆ ಸೇರಿದವರು ಎಂದು ಹೇಳಿ ಮಂಜುನಾಥ್ ಅವರು ಜಾತಿ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.
ಆದರೆ ಅವರು ಹಿಂದುಳಿದ ವರ್ಗ ಬೈರಾಗಿ ಜಾತಿಗೆ ಸೇರಿದವರಾದ್ದರಿಂದ, ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.