ಚಾಮರಾಜನಗರ: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ಮೂಗೂರು ಬಳಿ ಗೂಡ್ಸ್ ಆಟೋಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವಂತೆ ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವಂತೆ ಆಗ್ರಹಿಸಿ ಹನೂರು ಸಮೀಪದ ಮಂಗಲ ಗ್ರಾಮದ ಮುಖ್ಯರಸ್ತೆಯಲ್ಲಿ ಎರಡು ಮೃತ ದೇಹಗಳನ್ನಿಟ್ಟು ಪ್ರತಿಭಟನೆ ನಡೆಸಲಾಯಿತು.
ಹನೂರು ಸಮೀಪದ ಆನಾಪುರ ಗ್ರಾಮದ ಶಿವಮ್ಮ, ಸುರೇಶ್ ಹಾಗೂ ಶಾಗ್ಯ ಗ್ರಾಮದ ರತ್ನಮ್ಮ ಎಂಬವರು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಮಂದಿ ನಂಜನಗೂಡಿನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಗೂಡ್ಸ್ ಆಟೋದಲ್ಲಿ ಬುಧವಾರ ತೆರಳಿದ್ದರು. ಈ ವೇಳೆ ತಿ.ನರಸೀಪುರ ತಾಲೂಕಿನ ಮೂಗೂರು ಬಳಿ ಕೊಳ್ಳೇಗಾಲ, ಚಾಮರಾಜನಗರಕ್ಕೆ ಸಂಪರ್ಕ ಕಲಿಸುವ ತಿರುವಿನ ಬಳಿ ಗೂಡ್ಸ್ ಆಟೋಗೂ ಸಚಿನ್ ಎಂಬ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಪರಿಣಾಮ ಶಿವಮ್ಮ, ಸುರೇಶ್ ಹಾಗೂ ರತ್ನಮ್ಮ ಎಂಬವರು ಮೃತಪಟ್ಟಿದ್ದರು.
ಗಾಯಗೊಂಡ ಎಂಟು ಮಂದಿಯನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು. ರಾತ್ರಿ ಶಿವಮ್ಮ, ಸುರೇಶ್ ಹಾಗೂ ಶಾಗ್ಯ ಗ್ರಾಮದ ರತ್ನಮ್ಮ ಮೃತ ದೇಹವನ್ನು ಗ್ರಾಮಕ್ಕೆ ತರಲಾಗಿತ್ತು. ಆದರೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಾಳುಗಳ ಕುಟುಂಬಕ್ಕೆ ನೆರವು ನೀಡಲು ಬಸ್ ಮಾಲೀಕ ಹಿಂದೇಟು ಹಾಕಿದ್ದು ಆತನ ವಿರುದ್ದ ಕುಟುಂಬದ ಸಂಬಂಧಿಕರು ಮತ್ತು ಸ್ಥಳೀಯರು ಮಂಗಲ ಗ್ರಾಮದ ಹನೂರು -ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಹನೂರು ಇನ್ಪೆಕ್ಟರ್ ಪರಶುರಾಮ್ ಹಾಗೂ ಸಿಬ್ಬಂದಿ ತಂಡ, ಘಟನೆ ನಡೆದಿರುವುದು ಬೇರೆ ಠಾಣೆ ವ್ಯಾಪ್ತಿಯಲ್ಲಿ ಇಲ್ಲೇಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ಆಗಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ತಿಳಿಸಿದರು.
ಇದರಿಂದ ಕುಪಿತಗೊಂಡ ಗ್ರಾಮಸ್ಥರು ಬಸ್ ಮಾಲೀಕರನ್ನು ಸ್ಥಳಕ್ಕೆ ಕರೆಯಿಸಿ ಪರಿಹಾರ ಕೊಡಿಸಿ. ಅದನ್ನು ಬಿಟ್ಟು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರಾಮದಲ್ಲಿದ್ದ ಶಿವಮ್ಮನ ಮೃತದೇಹವನ್ನೂ ಸಹ ತಂದು ರಸ್ತೆಯಲ್ಲಿಟ್ಟು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಘಟನೆಯ ಪರಿಸ್ಥಿತಿಯನ್ನು ಅರಿತ ಪೊಲೀಸರು ಡಿವೈಎಸ್ಪಿ ಅವರ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಬಸ್ ವ್ಯವಸ್ಥಾಪಕರನ್ನು ಕರೆಯಿಸಿದರು.
ಈ ಸಂದರ್ಭದಲ್ಲಿ ಬಸ್ ವ್ಯವಸ್ಥಾಪಕ ಮಾತನಾಡಿ, ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹಾಗೂ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರದ ಬಗ್ಗೆ ಮಾಲೀಕರೊಂದಿಗೆ ಚರ್ಚಿಸಿ ಶುಕ್ರವಾರ ಪೋಲಿಸ್ ಹಾಗೂ ನಿಮ್ಮ ಸಮ್ಮುಖದಲ್ಲಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಪರಿಹಾರದ ಬಗ್ಗೆ ತೀರ್ಮಾನವಾಗುವವರೆಗೂ ಬಸ್ ಗಳನ್ನು ಬಿಡುವುದಿಲ್ಲ ಎಂದು ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಅಲ್ಲದೆ ಮೃತ ದೇಹಗಳ ಶವಸಂಸ್ಕಾರವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಜರಿದ್ದರು.