ಮಂಡ್ಯ: ನೆಲದನಿ ಬಳಗ, ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಲು ತಂಡ, ಸ್ವಾಮಿ ವೀರಾಂಜನೇಯ ಸೇವಾ ಸಮಿತಿ ವತಿಯಿಂದ ಜು.1ರಂದು ಮಧ್ಯಾಹ್ನ 1ಕ್ಕೆ ತಾಲ್ಲೂಕಿನ ಮಂಗಲ ಗ್ರಾಮದ ಮಾರಮ್ಮನ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಮಟ್ಟದ ನಾಟಿಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ಮಂಗಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನಪದ, ಗ್ರಾಮೀಣ ಕ್ರೀಡೆಗಳು, ಆಟಗಳು ನಶಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಇಂಥ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಭಾಗವಹಿಸುವ ಸ್ಪರ್ಧಿಗಳು ಸ್ಪರ್ಧೆ ಪ್ರಾರಂಭವಾಗುವ 1 ಗಂಟೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರವೇಶ ದರ 100 ರೂ. ಇದ್ದು, 15 ನಿಮಿಷಗಳ ಕಾಲಮಿತಿ ಇರುತ್ತದೆ. ಮದ್ಯಪಾನ ಮಾಡಿದವರಿಗೆ ಸ್ಪರ್ಧೆಗೆ ಅವಕಾಶವಿರುವುದಿಲ್ಲ. ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ. ನಗದು ಹಾಗೂ ಪಾರಿತೋಷಕ, ದ್ವಿತೀಯ 3500 ರೂ., ತೃತೀಯ 2 ಸಾವಿರ ರೂ., 4 ಮತ್ತು 5ನೇ ಸ್ಥಾನಕ್ಕೆ ಸಮಾಧಾನಕರವಾಗಿ 1 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಜನತಾ ಟಾಕೀಸ್ ನಿರ್ಮಾಣ ಮಾಡುತ್ತಿರುವ `ಆನೆಬಲ’ ಚಿತ್ರದಲ್ಲಿ ಅಭಿನಯಿಸಲು ಉತ್ತಮ ಸ್ಪರ್ಧೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರದಲ್ಲಿ ನಟಿಸಲು ಅವಕಾಶ ಹಾಗೂ ಸಂಭಾವನೆ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗೂ ಪ್ರೇಕ್ಷಕರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಕ್ರೀಡಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು